ಮಂಗಳೂರು ಮಾರ್ಚ್ 27: ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಘಟಿಕೋತ್ಸವದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಲಾಗಿದೆ. ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ದಿವಂಗತ ಯಕ್ಷಗಾನ ವಿದ್ವಾಂಸ ಕೆ. ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಈ ಗೌರವ ಸಂದಿದೆ ಎಂದು ಕುಲಪತಿ ಪ್ರೊ. ಪಿ. ಎಲ್. ಧರ್ಮ ತಿಳಿಸಿದ್ದಾರೆ.

ಮಣ್ಣಿನ ಸಂಸ್ಕೃತಿಗೆ ಮನ್ನಣೆ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ ಅವರ ಶಿಕ್ಷಣ ಸೇವೆ ಹಾಗೂ ದೈವಾರಾಧನೆ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ ರವೀಶ್ ಪಡುಮಲೆ ಅವರಿಗೆ ಶನಿವಾರ ನಡೆಯಲಿರುವ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು. ಇತ್ತೀಚೆಗಷ್ಟೇ ನಿಧನರಾದ ಯಕ್ಷಗಾನದ ಭೀಷ್ಮ ಕೆ. ಗೋವಿಂದ ಭಟ್ ಅವರಿಗೆ ಮರಣೋತ್ತರವಾಗಿ ಈ ಗೌರವ ನೀಡಲಾಗುತ್ತಿದ್ದು, ಏಪ್ರಿಲ್ 13ರಂದು ಅವರ ನಿವಾಸದಲ್ಲೇ ಪದವಿ ಹಸ್ತಾಂತರಿಸಲಾಗುವುದು. ವಿಶೇಷವೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ದೈವ ನರ್ತಕರೊಬ್ಬರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡುತ್ತಿದೆ.