ಕರಾವಳಿಯಲ್ಲಿ ಮತದಾನದ ಮೇಲೆ ಪರಿಣಾಮ ಬೀರಲಿರುವ ಭಾರಿ ಮಳೆ ಮುನ್ಸೂಚನೆ
ಮಂಗಳೂರು ಮೇ 10: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕೊನೆಯ ಘಟ್ಟ ತಲುಪಿದೆ. ಈ ನಡುವೆ ಈ ಬಾರಿಯ ಚುನಾವಣೆಗೆ ಮಳೆರಾಯ ಅಡ್ಡಿ ಎದುರಾಗಲಿದೆ. ಹವಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಚುನಾವಣೆಯ ದಿನದಂದೆ ರಾಜ್ಯದ ಪ್ರಮುಖ ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಕಾರವಾರದಲ್ಲಿ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಚುನಾವಣೆಯ ದಿನ ಮೇ 12 ರಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ ಮೂರು ದಿನಗಳ ಕಾಲವೂ ರಾಜ್ಯದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರಿ ಮಳೆಯಾದರೆ ಶೇಕಡವಾರು ಮತದಾನದ ಮೇಲೆ ಪರಿಣಾಮ ಬೀರಲಿದ್ದು , ಮಳೆಯಿಂದ ಎದುರಾಗುವ ಸಮಸ್ಯೆಗಳಿಂದ ಪಾರಾಗಲು ಮತದಾರರು ಸಾಧ್ಯವಾದಷ್ಟು ಬೇಗ ಮತದಾನ ಮಾಡುವಂತೆ ಸಲಹೆ ನೀಡುತ್ತೇವೆಂದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿಯವರು ಹೇಳಿದ್ದಾರೆ.
ಮತದಾರರು 3 ಗಂಟೆಗಳೊಳಗಾಗಿ ಮತದಾನ ಮಾಡಿದ್ದರೆ, ಮಳೆ ಸಮಸ್ಯೆಯಿಂದ ದೂರ ಇರಬಹುದು ಎಂದು ತಿಳಿಸಿದ್ದಾರೆ.
ಕರಾವಳಿ ತೀರ ಪ್ರದೇಶ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಹಾಗೂ ಕಾರವಾರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.