LATEST NEWS
ಕರಾವಳಿಯಲ್ಲಿ ಮುಂದುವರಿದ ಭಾರೀ ಮಳೆ, ಹೆಚ್ಚಾಗಿದೆ ಕಡಲಿನ ಅಬ್ಬರ….
ಮಂಗಳೂರು ಅಗಸ್ಟ್ 6: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಇಂದು ಕೊಂಚ ಇಳಿಮುಖವಾಗಿದೆ. ಆದರೆ ಘಟ್ಟ ಪ್ರದೇಶಗಳಾದ ಸಕಲೇಶಪುರ,ಶಿರಾಡಿ, ಸುಬ್ರಹ್ಮಣ್ಯ, ಸಿರಿಬಾಗಿಲು ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಕುಮಾರಧಾರಾ ನದಿ ತುಂಬಿಕ್ಕಿ ಹರಿಯುತ್ತಿದೆ.
ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರಾ ಸ್ನಾನಘಟ್ಟ ಕಳೆದ ನಾಲ್ಕು ದಿನಗಳಿಂದ ನದಿ ನೀರಿನಿಂದ ಮುಳುಗಡೆಯಾಗಿದೆ. ಸ್ನಾನಘಟ್ಟದಲ್ಲಿರುವ ಭಕ್ತಾಧಿಗಳ ಸ್ನಾನಗೃಹ, ಶೌಚಾಲಯ ಹಾಗೂ ಲಗೇಜ್ ರೂಮ್ ಗಳು ಭಾಗಶ ಜಲಾವೃತವಾಗಿದೆ. ಕರಾವಳಿಯಲ್ಲಿ ಅಗಸ್ಟ್ 10 ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ.
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಲ್ಬೆಟ್ಟು ಎಂಬಲ್ಲಿ ಭಾರೀ ಮಳೆಗೆ ಕಿರು ಸೇತುವೆಯಿಂದು ಬಿರುಕು ಬಿಟ್ಟಿದ್ದು, ಇದರಿಂದಾಗಿ ಕಲ್ಬೆಟ್ಟು ಗ್ರಾಮದ ಜನ ಸಂಪರ್ಕ ಕಡಿತಗೊಳ್ಳುವ ಆತಂಕದಲ್ಲೂ ಇದ್ದಾರೆ.
ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುವ ಎಚ್ಚರಿಕೆಯನ್ನೂ ಹವಮಾನ ಇಲಾಖೆ ನೀಡಿದೆ. ಸಮುದ್ರದಲ್ಲೂ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕಡಲ ತೀರಗಳಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಮೊದಲಾದ ಪ್ರದೇಶಗಳಲ್ಲಿ ಕಡಲ್ಕೊರೆತ ಹೆಚ್ಚಾಗಲಾರಂಭಿಸಿದೆ. ಉಚ್ಚಿಲ, ಬಟ್ಟಪ್ಪಾಡಿ ಸಂಪರ್ಕ ಕಲ್ಪಿಸುವ ರಸ್ತೆ ಭಾಗಶ ಸಮುದ್ರ ಪಾಲಾಗಿದ್ದು, ಸಂಪೂರ್ಣ ರಸ್ತೆ ಸಮುದ್ರ ಪಾಲಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿದೆ.
ಉಡುಪಿ ಜಿಲ್ಲೆಯಲ್ಲೂ ಅಗಸ್ಟ್ 10 ರ ವರೆಗೆ ಭಾರೀ ಮಳೆ ಗಾಳಿ ಬೀಸಲಿದ್ದು, ಉಡುಪಿ ಜಿಲ್ಲೆಯಾದ್ಯಂತ ರೆಡ್ ಮತ್ತು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ವಾರಾಹಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದ, ನದಿ ಪಾತ್ರಗಳಲ್ಲಿ ನೆರೆಯಾಗುವ ಲಕ್ಷಣ ಕಂಡು ಬಂದಿದೆ. ನದಿ ಪಾತ್ರಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆಯನ್ನೂ ನೀಡಲಾಗಿದೆ.
You must be logged in to post a comment Login