ಕಾರವಾರ ಫೆಬ್ರವರಿ 14: ಬೇಸಿಗೆ ಪ್ರಾರಂಭದಲ್ಲೇ ಶಾಖದ ಅಲೆ ಸಮಸ್ಯೆ ಪ್ರಾರಂಭವಾಗಿದ್ದು, ಈ ಬಾರಿ ಬೇಸಿಗೆ ಹೇಗಿರಬಹುದು ಎನ್ನವುದು ಉಹಿಸಬಹುದು, ಹವಾಮಾನ ಇಲಾಖೆ ಉತ್ತರಕನ್ನಡ ಜಿಲ್ಲೆಯಲ್ಲಿ ಫೆ.14 ಮತ್ತು 15ರಂದು ಶಾಖದ ಅಲೆಯ ವಾತಾವರಣ ಇರಲಿದ್ದು, ಆರ್ದೃತೆ ಅಧಿಕವಾಗಿರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೂರು–ನಾಲ್ಕು ದಿನಗಳಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ಸೆಕೆ ಇದೆ. ಬೇಸಿಗೆ ಆರಂಭದಲ್ಲೇ ಸೆಕೆ ಹೆಚ್ಚಳದ ಮುನ್ಸೂಚನೆ ನೀಡಿದೆ. ‘ಶಾಖ ಅಲೆ ಕಾರಣ ಎರಡು ದಿನ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ಮನೆಯಿಂದ ಹೊರಗೆ ಓಡಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸಲಹೆ ಮಾಡಿದ್ದಾರೆ.
ಫೆ.12ರಂದು ಕಾರವಾರದಲ್ಲಿ 37.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.