ಮಂಗಳೂರು ಫೆಬ್ರವರಿ 22: ಯಾವುದೇ ನೊಂದಣಿ ಇಲ್ಲದೆ ಅನಧಿಕೃತವಾಗಿ ರಕ್ತ ಪರೀಕ್ಷಾ ಕೇಂದ್ರದ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಲ್ಯಾಬ್ ಗೆ ಬೀಗ ಜಡಿದ ಘಟನೆ ವಿಟ್ಲದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರು ವಿಟ್ಲದಲ್ಲಿರುವ ಕ್ಲಿನಿಕ್ ಮತ್ತು ಲ್ಯಾಬ್ ಒಂದರಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡಿದ್ದರು, ಆದರೆ ವರದಿಯ ಬಗ್ಗೆ ಅನುಮಾನ ಬಂದು ಬೇರೆಡೆ ರಕ್ತ ಪರೀಕ್ಷೆ ಮಾಡಿಸಿದಾಗ ಸರಿಯಾದ ವರದಿ ಬಂದಿತ್ತು. ಅಲ್ಲದೆ ಸಂಸ್ಥೆಯವರು ಸಹಿ ಮಾಡದೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ದೂರು ನೀಡಿದ್ದರು.
ಅದರನ್ವಯ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ/ ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿ ಅವರಿಗೆ ತನಿಖೆ ನಡೆಸಲು ಆದೇಶಿಸಲಾಗಿತ್ತು. ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದರು.
ಡಿಎಚ್ಒ ಆದೇಶದಂತೆ ಶನಿವಾರ ಜಿಲ್ಲಾ ಎನ್ಫೋರ್ಸ್ಮೆಂಟ್ ಅಧಿಕಾರಿ ಡಾ| ದೀಪಾ ಪ್ರಭು ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ಕುಮಾರ್ರೈ ಮತ್ತು ಸಿಬಂದಿ ಕ್ಲಿನಿಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅನಧಿಕೃತವಾಗಿ ಕೆಪಿಎಂಇಎ ನೋಂದಣಿ ಇಲ್ಲದೇ ಕ್ಲಿನಿಕ್ ನಡೆಸುತ್ತಿರುವುದು ಕಂಡುಬಂದಿರುವ ಹಿನ್ನೆಲೆ ತತ್ಕ್ಷಣವೇ ಕ್ಲಿನಿಕ್ಗೆ ಬೀಗಮುದ್ರೆ ಹಾಕಲಾಗಿದೆ. ವಿಟ್ಲ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.