ಹಾವೇರಿ, ಮಾರ್ಚ್ 21 : ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ಮಲ್ಲೇಶ್ವರ ಅರಣ್ಯ ಪ್ರದೇಶದ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ, ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ನಾಶವಾಗಿರುವ ಘಟನೆ ಮಾರ್ಚ್ 21 ರಂದು ನಡೆದಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಅರಣ್ಯ ಪ್ರದೇಶವು ಬೆಂಕಿಯ ಕೆನ್ನಾಲಿಗೆಯಲ್ಲಿ ಧಗಧಗನೆ ಹೊತ್ತಿ ಉರಿದಿದೆ.

ತಾಲೂಕಿನ ಆರೇಮಲ್ಲಾಪುರ ಮತ್ತು ಐರಣಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಈ ಗುಡ್ಡವು ‘ಕೃಷ್ಣಮೃಗ ಅಭಯಾರಣ್ಯ’ದ ಪ್ರಮುಖ ಭಾಗವಾಗಿದೆ. ಇಲ್ಲಿನ ಸಮೃದ್ಧ ವನಸ್ಪತಿ ಹಾಗೂ ಔಷಧೀಯ ಗಿಡಮೂಲಿಕೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಭೀಕರತೆಗೆ ಅಭಯಾರಣ್ಯದ ಪ್ರಾಣಿ-ಪಕ್ಷಿಗಳು ಜೀವಭಯದಿಂದ ದಿಕ್ಕಾಪಾಲಾಗಿ ಓಡಿವೆ. ದಟ್ಟವಾದ ಹೊಗೆ ಮತ್ತು ಜ್ವಾಲೆಯಿಂದಾಗಿ ಈ ಭಾಗದ ಪರಿಸರಕ್ಕೆ ತೀವ್ರ ಹಾನಿ ಉಂಟಾಗಿದೆ.
ಈ ಪ್ರದೇಶದ ಪ್ರಾಕೃತಿಕ ಸೌಂದರ್ಯವನ್ನು ಪರಿಗಣಿಸಿ ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿತ್ತು. ಆದರೆ, ಅಭಿವೃದ್ಧಿಯ ಕಾರ್ಯಗಳು ಆರಂಭವಾಗುವ ಮೊದಲೇ ಕಿಡಿಗೇಡಿಗಳು ಈ ಅರಣ್ಯಧಾಮಕ್ಕೆ ಬೆಂಕಿ ಹಚ್ಚಿ ವಿನಾಶಕ್ಕೆ ಕಾರಣರಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಪರಿಶ್ರಮದ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಬೆಂಕಿ ಮತ್ತಷ್ಟು ವ್ಯಾಪಿಸುವುದು ತಪ್ಪಿದಂತಾಗಿದ್ದು, ಪರಿಸ್ಥಿತಿ ಸದ್ಯ ಹತೋಟಿಯಲ್ಲಿದೆ.
ಈ ದುಷ್ಕೃತ್ಯದ ಬಗ್ಗೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಾಲ ಬೀಸಿದ್ದಾರೆ.