ಹಾವೇರಿ, ಏಪ್ರಿಲ್ 27: ನಿಶ್ಚಿತಾರ್ಥಕ್ಕೆ ಒಂದು ದಿನ ಇರುವಾಗಲೇ ರಾತ್ರೋರಾತ್ರಿ ಯುವತಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿ ಕುಟುಂಬಕ್ಕೆ ಶಾಕ್ ನೀಡಿದ ಘಟನೆ ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಲವ್ ಜಿಹಾದ್ ಆರೋಪ ಕೇಳಿಬಂದಿದೆ.

ಶಂಕ್ರಿಕೊಪ್ಪ ಗ್ರಾಮದ ನಿವಾಸಿ ಶಂಕ್ರಮ್ಮ ಕೆರಿಮತ್ತಿಹಳ್ಳಿ (24) ನಾಪತ್ತೆಯಾದ ಯುವತಿ. ಈಕೆಗೆ ಏಪ್ರಿಲ್ 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಿಗದಿಯಾಗಿತ್ತು, ಮೇ 11ಕ್ಕೆ ಮದುವೆ ಮುಹೂರ್ತವೂ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿ ಶಂಕ್ರಮ್ಮ ನಾಪತ್ತೆಯಾಗಿದ್ದಾಳೆ.
ನರೇಗಲ್ ಗ್ರಾಮದ ನಿವಾಸಿ ಇಬ್ರಾಹಿಂ ನೆಗಳೂರು ಎಂಬ ಯುವಕ ಶಂಕ್ರಮ್ಮನನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಅಕ್ಕಿಆಲೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಇಬ್ಬರ ನಡುವೆ ಪರಿಚಯವಾಗಿತ್ತು ಎನ್ನಲಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹಿಂದೂಪರ ಸಂಘಟನೆಗಳು, “ಇದು ವ್ಯವಸ್ಥಿತ ಲವ್ ಜಿಹಾದ್ ಸಂಚು” ಎಂದು ಕಿಡಿಕಾರಿವೆ.
ಮಗಳು ಕಾಣೆಯಾದ ದುಃಖದಲ್ಲಿರುವ ತಾಯಿ ನನ್ನ ಮಗಳನ್ನು ಹೇಗಾದರೂ ಮಾಡಿ ಮರಳಿ ಕರೆತನ್ನಿ ಎಂದು ಅಡೂರು ಪೊಲೀಸ್ ಠಾಣೆಯ ಮುಂದೆ ಕಣ್ಣೀರು ಹಾಕಿದ್ದಾರೆ. ಪ್ರಕರಣದ ಬಗ್ಗೆ ಅಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಪತ್ತೆಯಾದ ಯುವತಿ ಮತ್ತು ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.