ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸದಾ ಕನಸುಗಳ ಲೋಕದಲ್ಲೇ ತೇಲುವ, ಯಾವುದೇ ವಿವಾದಗಳಿಗೂ ಸಿಲುಕದ ‘ಕ್ರೇಜಿಸ್ಟಾರ್’ ವಿ. ರವಿಚಂದ್ರನ್ ವಿರುದ್ಧ ದಶಕಗಳ ಹಿಂದೆ ಕೇಳಿಬಂದಿದ್ದ ಗಂಭೀರ ಆರೋಪವೊಂದಕ್ಕೆ ಸಂಬಂಧಿಸಿದಂತೆ ನಟಿ ಬಿಂದಿಯಾ (ಫರ್ಹೀನ್ ಖಾನ್) ಈಗ ಬಹಿರಂಗವಾಗಿ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದಾರೆ. ಕನ್ನಡದ ಖ್ಯಾತ ನಟ, ನಿರ್ದೇಶಕ ರಘುರಾಮ್ ಅವರ ‘ಆರ್ಆರ್ ಕನಸುಗಳ ಕಾರ್ಖಾನೆ’ ಯೂಟ್ಯೂಬ್ ಚಾನೆಲ್ನ ‘ನೂರೊಂದು ನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಂದಿಯಾ, ಅಂದಿನ ಘಟನೆಯ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ.

1992ರ ‘ಹಳ್ಳಿಮೇಷ್ಟ್ರು’ ಮತ್ತು ವಿವಾದದ ಕಿಡಿ:
1992ರಲ್ಲಿ ತಮಿಳಿನ ‘ಮುಂದಾನೈ ಮುಡಿಚು’ ಚಿತ್ರದ ರೀಮೇಕ್ ಆಗಿ ತೆರೆಕಂಡ ‘ಹಳ್ಳಿಮೇಷ್ಟ್ರು’ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ರವಿಚಂದ್ರನ್ ಮತ್ತು ಬಿಂದಿಯಾ ಕಾಂಬಿನೇಶನ್ನ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ, ಈ ಯಶಸ್ಸಿನ ಬೆನ್ನಲ್ಲೇ ನಟಿ ಬಿಂದಿಯಾ ಮ್ಯಾಗಝೀನ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ “ರವಿಚಂದ್ರನ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು” ಎಂಬ ಗಂಭೀರ ಆರೋಪ ಮಾಡಿದ್ದಾಗಿ ಪ್ರಕಟವಾಗಿ ಇಡೀ ಚಿತ್ರರಂಗವೇ ಬೆಚ್ಚಿಬೀಳುವಂತೆ ಮಾಡಿತ್ತು.
ಕೇವಲ 1 ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದ ರವಿಚಂದ್ರನ್:
ಸಿನಿಮಾವನ್ನೇ ಉಸಿರಾಗಿಸಿಕೊಂಡಿದ್ದ ರವಿಚಂದ್ರನ್ ಅವರಿಗೆ ಈ ಸುಳ್ಳು ಆರೋಪ ತೀವ್ರ ಆಘಾತ ಉಂಟುಮಾಡಿತ್ತು. ತಮ್ಮ ಮೇಲಿನ ಕಳಂಕವನ್ನು ತೊಳೆದುಕೊಂಡು, ಸತ್ಯವನ್ನು ಜಗತ್ತಿಗೆ ಸಾರಲು ರವಿಚಂದ್ರನ್ ನಟಿ ಬಿಂದಿಯಾ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಶೇಷವೆಂದರೆ, ರವಿಚಂದ್ರನ್ ಅವರು ಕೇಳಿದ್ದ ಪರಿಹಾರದ ಮೊತ್ತ ಕೇವಲ ‘1 ರೂಪಾಯಿ’! ದುಡ್ಡಿನ ಆಸೆಗಲ್ಲ, ತಮ್ಮ ಗೌರವಕ್ಕಾಗಿ ಅವರು ಈ ಹೋರಾಟ ಮಾಡಿದ್ದರು. ಕೋರ್ಟ್ ವಿಚಾರಣೆ ವೇಳೆ ತಬ್ಬಿಬ್ಬಾದ ನಟಿ ಬಿಂದಿಯಾ, “ನಾನು ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ, ಅದೆಲ್ಲಾ ಸುಳ್ಳು” ಎಂದು ತಪ್ಪೊಪ್ಪಿಕೊಂಡು ಅಂದೇ ನ್ಯಾಯಾಲಯದಲ್ಲಿ ಕ್ಷಮೆ ಕೇಳಿದ್ದರು.
ಮ್ಯಾಗಝೀನ್ನಿಂದ ಹೇಳಿಕೆ ತಿರುಚುವಿಕೆ – ಕಣ್ಣೀರಿಟ್ಟ ನಟಿ:
ಈಗ ದಶಕಗಳ ಬಳಿಕ ಯೂಟ್ಯೂಬ್ ಸಂದರ್ಶನದಲ್ಲಿ ಅಂದಿನ ಕರಾಳ ದಿನಗಳನ್ನು ನೆನೆದು ಕಣ್ಣೀರಿಟ್ಟಿರುವ ಬಿಂದಿಯಾ, “ಹಳ್ಳಿಮೇಷ್ಟ್ರು ಸಿನಿಮಾ ಟೈಮ್ನಲ್ಲಿ ಹಿಂದಿಯ ‘ಜಾನ್ ತೇರೆ ನಾಮ್’ ಹಿಟ್ ಆಗಿದ್ದರಿಂದ ರವಿ ಸರ್ ನನ್ನನ್ನು ಬಾಂಬೆಯಲ್ಲಿ ಭೇಟಿಯಾಗಿ ಹೊಸಬಳಂತೆ ಗೌರವದಿಂದ ನಡೆಸಿಕೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಪತ್ರಕರ್ತೆಯೊಬ್ಬರು ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ತಿರುಚಿ ಮ್ಯಾಗಝೀನ್ನಲ್ಲಿ ಪ್ರಕಟಿಸಿದರು. ನಾನು ಹೇಳಿದ್ದೇ ಒಂದು, ಅವರು ಬರೆದಿದ್ದೇ ಇನ್ನೊಂದು! ನಾನು ಹಾಗೆ ಹೇಳಿದ್ದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆ ಮ್ಯಾಗಝೀನ್ ಮಾಡಿದ ತಪ್ಪಿನಿಂದ ರವಿ ಸರ್ಗೆ ಕೆಟ್ಟ ಹೆಸರು ಬಂತು. ಇದರಲ್ಲಿ ನನ್ನ ತಪ್ಪೇನೂ ಇರಲಿಲ್ಲ. ಆದರೂ ರವಿಚಂದ್ರನ್ ಸರ್ ಹಾಗೂ ಎಲ್ಲರಲ್ಲೂ ನಾನು ಮತ್ತೊಮ್ಮೆ ಬಹಿರಂಗವಾಗಿ ಸಾರಿ ಕೇಳುತ್ತೇನೆ” ಎಂದು ಭಾವುಕರಾಗಿದ್ದಾರೆ.