LATEST NEWS
ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವವರ ನಡುವೆ…..ಸಜ್ಜನ ರಾಜಕಾರಣಿ ಕುಂದಾಪುರದ ವಾಜಪೇಯಿ ಹಾಲಾಡಿಯವರ ಖಡಕ್ ಮಾತು…!!!
ಉಡುಪಿ ಜುಲೈ 29: ನನ್ನ ಉಸಿರು ಇರುವವರೆಗೂ ನಾನು ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬೀಳುವುದಿಲ್ಲ ಎಂದು ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ನನ್ನ ಶ್ವಾಸ ಇದ್ದರೆ ನಾನು ಬೆಂಗಳೂರಿಗೆ ಸಚಿವ ಸ್ಥಾನ ಕೇಳಲು ಹೋಗುವುದಿಲ್ಲ, ಯಾರ ಕಾಲಿಗೂ ಬೀಳುವುದಿಲ್ಲ, ಯಾವ ನಾಯಕನ ಹಿಂದೆ ಸುತ್ತು ಬರುತ್ತಾ ತಿರುಗಾಡಲು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟವನಲ್ಲ, ರಾಜಕೀಯ ಲಾಬಿ ಜಾತಿವಾದಿತನ ನಾನು ಮಾಡುವುದಿಲ್ಲ, ನನಗೆ ಕೆಲಸ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ ಬಿಟ್ಟರೆ ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ ಎಂದರು.
ಇನ್ನು ಒಂದು ವೇಳೆ ಸಚಿವ ಸ್ಥಾನ ದೊರೆತರೆ ನಾನು ಸರಕಾರಿ ಕಾರಿನಲ್ಲಿ ತಿರುಗುವುದಿಲ್ಲ, ಎಸ್ಕಾರ್ಟ್, ಗನ್ ಮ್ಯಾನ್ ತೆಗೆದುಕೊಳ್ಳುವುದಿಲ್ಲ ಎಂದರು. ನನಗೆ ಯಾರ ಭಯವೂ ಇಲ್ಲ. ನಾನು ಹೆಡ್ ರಾಜಕಾರಣಿ ಅಲ್ಲ. ನನ್ನದು ನೇರನುಡಿಯ ರಾಜಕಾರಣ. ದುರಹಂಕಾರ ಅಲ್ಲ, ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು ಎಂದರು.
ಸಚಿವ ಸ್ಥಾನವನ್ನ ಕೇಳಿ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ, ಕೇಳಿ ಅಧಿಕಾರವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ, ನಾನು ಜಾತ್ಯಾತೀತ ರಾಜಕಾರಣಿ, ನನ್ನ ಹುಟ್ಟಿನಿಂದ ನಾನು ಜಾತಿ ಸಂಘಕ್ಕೆ ಹೋಗಿಲ್ಲ, ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ ಆದರೆ ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ದಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ ಎಂದ ಅವರು ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕು ಹೊರತು ರಾಜ್ಯಕ್ಕೆ ಅಲ್ಲ, ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು, ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು ಎಂದರು.
You must be logged in to post a comment Login