LATEST NEWS
ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ
ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ
ಮಂಗಳೂರು ಜನವರಿ 7: ಶಬರಿಮಲೆ ಯಾತ್ರೆಗೆ ತೆರಳಲು ಮುಂದಾಗಿದ್ದ ಗುರುಸ್ವಾಮಿಯೊಬ್ಬರು ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮುಡಿಪು ಮೂಳೂರಿನಲ್ಲಿ ನಡೆದಿದೆ.
ಸುರೇಶ್ ನಾಯಕ್ (48) ಹೃದಯಾಘಾತಕ್ಕೊಳಗಾದ ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿ. ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಸುರೇಶ್ ಅವರು ಕಳೆದ ಅನೇಕ ವರುಷಗಳಿಂದ ಶಬರಿಮಲೆ ಯಾತ್ರೆ ಮಾಡುತ್ತಾ ಬಂದಿದ್ದರು.
ಈ ಬಾರಿಯೂ ಶಬರಿಮಲೆ ವೃತ ಮಾಡಿದ್ದು ಮಾಲೆ ಧರಿಸಿದ್ದರು, ಮೂಳೂರಿನ ತಮ್ಮ ಮನೆಯ ಹತ್ತಿರದ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಜೊತೆ ತಂಗಿ ವ್ರತಾಚಾರಣೆ ಮಾಡುತ್ತಿದ್ದರು. ಸೋಮವಾರದಂದು ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸುರೇಶ್ ಗುರುಸ್ವಾಮಿ ಸ್ನಾನ ಮಾಡಿ ಇರುಮುಡಿ ಕಟ್ಟಲು ದೇವಸ್ಥಾನದ ಗರ್ಭಗುಡಿ ಪ್ರವೇಶಿಸುತ್ತಿದ್ದಂತೆಯೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಸೋಮವಾರದಂದು ಶಬರಿಮಲೆ ಯಾತ್ರೆಯ ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಮದ್ಯಾಹ್ನ ಅನ್ನದಾನ ಏರ್ಪಡಿಸಲಾಗಿತ್ತು. ಬೆಳಿಗ್ಗೆಯೇ ಅನ್ನ,ವಿವಿದ ಬಗೆಯ ಖಾದ್ಯಗಳನ್ನು ತಯಾರಿಸಿಡಲಾಗಿತ್ತು. ಗುರುಸ್ವಾಮಿಯ ಅಕಾಲಿಕ ಸಾವಿನಿಂದ ಸ್ಥಳೀಯವಾಗಿ ಶೋಕ ಮಡುಗಟ್ಟಿದ್ದು ಅನ್ನದಾನಕ್ಕೆ ತಯಾರಿಸಿದ್ದ ಅಡುಗೆಯನ್ನು ಅನಾಥಾಶ್ರಮಕ್ಕೆ ನೀಡಲಾಯಿತು.
You must be logged in to post a comment Login