ಮಹಿಸಾಗರ್, ಅಕ್ಟೋಬರ್ 30: ಭೀಕರ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಕಾರಿನ ಚಾಲಕನೊಬ್ಬ ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ಬೈಕ್ ಮತ್ತು ಸವಾರನ್ನು ಕಿಲೋಮೀಟರ್ ಗಟ್ಟಲೆ ಎಳೆದೊಯ್ದ ಘಟನೆ ನಡೆದಿದ್ದು, ಈ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗುಜರಾತ್ನ ಮಹಿಸಾಗರ್ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ರ ಮೋಡಸ ಲುನವಾಡ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರು ಚಾಲಕ ಬೈಕ್ಗೆ ಡಿಕ್ಕಿ ಹೊಡೆದು ಸವಾರನ ಸಮೇತ 1.5ಕಿ.ಮೀವರೆಗೆ ಎಳೆದೊಯ್ದಿರುವ ಘಟನೆ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಇದೀಗ ಕಾರಿನಲ್ಲಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರನ್ನು ಮನೀಶ್ ಪಟೇಲ್ (ಕಾರು ಚಾಲಕ) ಮತ್ತು ಮೆಹುಲ್ ಪಟೇಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ.
ಹೋದ್ ಜಿಲ್ಲೆಯ ಫತೇಪುರ ಗ್ರಾಮದ 51 ವರ್ಷದ ಕಾರ್ಮಿಕ ದಿನೇಶ್ ವರ್ಜಿಭಾಯ್ ಚರೇಲ್ ಮತ್ತು ಅವರ ಸಹೋದರ ಸುನಿಲ್ ದಿನೇಶ್ಭಾಯ್ ಮಾಚರ್ (21) ತಮ್ಮ ಹಳ್ಳಿಯ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದರು. ವೇಗವಾಗಿ ಬಂದ ಕಾರು ಇದ್ದಕ್ಕಿದ್ದಂತೆ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಬೈಕ್ ಕಾರಿನ ಮುಂಭಾಗದ ಬಾನೆಟ್ಗೆ ಸಿಲುಕಿಕೊಂಡವು. ಆದರೆ, ಈ ಪರಿಸ್ಥಿತಿಯಲ್ಲಿ, ಕುಡಿದ ಮತ್ತಿನಲ್ಲಿದ್ದ ಶಿಕ್ಷಕ ಮನೀಶ್ ಪಟೇಲ್ ಸುಮಾರು 5 ಕಿಲೋಮೀಟರ್ ತನ್ನ ಕಾರನ್ನು ಚಲಾಯಿಸಿದರು. ಈ ಸಮಯದಲ್ಲಿ, ಇತರ ವಾಹನ ಚಾಲಕರು ಕೂಗುತ್ತಾ ಮತ್ತು ಕಿರುಚುತ್ತಾ ಅವರನ್ನು ತಡೆಯಲು ಪ್ರಯತ್ನಿಸಿದರು, ಆದರೆ ಪ್ರತ್ಯಕ್ಷದರ್ಶಿಗಳು ಆರೋಪಿಗಳು ಮೊದಲು ಅವರಿಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು ಎಂದು ವರದಿ ಮಾಡಿದ್ದಾರೆ.