KARNATAKA
ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ: ಕನ್ನಡದಲ್ಲಿ ಟ್ವೀಟ್ ಮಾಡಿದ ಪ್ರಧಾನಿ
ಬೆಂಗಳೂರು, ಜೂನ್ 20: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ (ಜೂ 20, 21) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರು ಹಾಗೂ ಮೈಸೂರಿಗೆ ಆಗಮಿಸುತ್ತಿದ್ದಾರೆ.
ಇದಕ್ಕೂ ಮುನ್ನ ಕನ್ನಡದಲ್ಲೇ ಟ್ವೀಟ್ ಮಾಡಿರುವ ಅವರು ನಾನು ಕರ್ನಾಟಕಕ್ಕೆ ಹೋಗುತ್ತಿರುವೆ ಎಂದಿದ್ದಾರೆ. ‘ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ ಭಾರತೀಯ ವಿಜ್ಞಾನ ಭವನದಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು’ ಎಂದಿದ್ದಾರೆ.
‘ಸೋಮವಾರ ಮಧ್ಯಾಹ್ನ, ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ ಮಾಡಲಿದ್ದೇನೆ. 150 ಟೆಕ್ ಹಬ್ಗಳ ಲೋಕಾರ್ಪಣೆ ಕೂಡ ಮಾಡುವೆ’ ಎಂದಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ @iiscbangalore, ಅಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು.
— Narendra Modi (@narendramodi) June 20, 2022
‘ಬೆಂಗಳೂರಿನ ಕಾರ್ಯಕ್ರಮದಲ್ಲಿ, ₹27,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ. ಈ ಕಾಮಗಾರಿಗಳು ವಿವಿಧ ಕ್ಷೇತ್ರಗಳಿಗೆ ಸೇರಿದ್ದು ಬೆಂಗಳೂರಿನ ಹಾಗು ಸುತ್ತಮುತ್ತಲಿನ ಜನರ ‘ಸುಗಮ ಜೀವನ’ಕ್ಕೆ ನೆರವಾಗಲಿದೆ’ ಎಂದು ಪ್ರಧಾನಿ ಹೇಳಿದ್ದಾರೆ.
ಸಂಜೆ 5.30ರ ವೇಳೆಗೆ ಮೈಸೂರು ತಲುಪುವೆ. ಅಲ್ಲಿಯೂ ಪ್ರಮುಖ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸುವೆ. ಸುತ್ತೂರು ಮಠದ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವೆ. ನಾಳೆ ಬೆಳಗ್ಗೆ, ಮೈಸೂರಿನಲ್ಲಿ ಯೋಗ ದಿನದ ಕಾರ್ಯಕ್ರಮವೂ ನೆರವೇರಲಿದೆ ಎಂದು ಮೋದಿ ತಿಳಿಸಿದ್ದಾರೆ. ಇನ್ನು ಮೋದಿ ಬೆಂಗಳೂರಿಗೆ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೋದಿ ಸಂಚರಿಸುವ ಮಾರ್ಗದ 64 ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಅವರು ಸೋಮವಾರ ಬೆಳಿಗ್ಗೆ 11.55 ಕ್ಕೆ ಬಂದು ತಲುಪಲಿದ್ದಾರೆ.
You must be logged in to post a comment Login