ಪಣಜಿ ಜುಲೈ 04: ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ ಉದ್ಯಮಿಯೊಬ್ಬರನ್ನು ಕ್ಯಾಸಿನೋದಲ್ಲಿ ಸ್ನೇಹ ಬೆಳಸಿ ರೆಸಾರ್ಟ್ ಕೋಣೆಯಲ್ಲಿ ಅತಿಯಾದ ಮಾದಕ ದ್ರವ್ಯ (ನಿದ್ರಾಜನಕ) ನೀಡಿ ಕೊಲೆ ಮಾಡಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಬೆಂಗಳೂರಿನ 40 ವರ್ಷದ ಮಹಿಳೆ ಅಕ್ಷತಾ ಎಂ.ಕೆ ಅಲಿಯಾಸ್ ರೂಪಶ್ರೀ ಸಿ. ಎಂಬಾಕೆಯನ್ನು ಗೋವಾ ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದಾರೆ. ತನಿಖೆ ವೇಳೆ ಈಕೆ ಹೈಪ್ರೊಫೈಲ್ ಇಂಟರ್ಸ್ಟೇಟ್ ಹನಿಟ್ರ್ಯಾಪ್ ಮತ್ತು ದರೋಡೆ ದಂಧೆಯ ಸರಣಿ ಅಪರಾಧಿ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಉಡುಪಿ ಜಿಲ್ಲೆಯ ಮಲ್ಪೆ ಮೂಲದ ಪ್ರಸಿದ್ಧ ವಾಟರ್ ಸ್ಪೋರ್ಟ್ಸ್ ಉದ್ಯಮಿ ಸಂದೀಪ್ ಸಾಲ್ಯಾನ್ (41) ಕೊಲೆಯಾದ ದುರ್ದೈವಿ. ಉದ್ಯಮಿ ಸಂದೀಪ್ ಸಾಲ್ಯಾನ್ ಅವರು ಜೂನ್ 30ರಂದು ಗೋವಾಕ್ಕೆ ತೆರಳಿದ್ದ ವೇಳೆ ಕ್ಯಾಲಂಗುಟ್ನ ಲಾಡ್ಜ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಮೊದಲಿಗೆ ಇದನ್ನು ಸಾಮಾನ್ಯ ‘ಹೃದಯಾಘಾತ’ ಎಂದು ಭಾವಿಸಲಾಗಿತ್ತು. ಆದರೆ ಮೃತರ ಮೈಮೇಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು ಬಳೆಗಳು ಕಾಣೆಯಾಗಿದ್ದರಿಂದ ಕುಟುಂಬಸ್ಥರು ಮತ್ತು ಪೊಲೀಸರಿಗೆ ತೀವ್ರ ಶಂಕೆ ಮೂಡಿತ್ತು. ಕ್ಯಾಲಂಗುಟ್ ಪೊಲೀಸರು ತಕ್ಷಣವೇ ಲಾಡ್ಜ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ, ಸಂದೀಪ್ ಅವರೊಂದಿಗೆ ರೂಮಿಗೆ ಬಂದಿದ್ದ ರಹಸ್ಯ ಮಹಿಳೆಯೊಬ್ಬಳು ಸದ್ದಿಲ್ಲದೆ ಹೊರಟು ಹೋಗಿರುವುದು ಪತ್ತೆಯಾಗಿತ್ತು.
ಕೊಲೆಗಡುಕಿ ಮಹಿಳೆಯ ಪತ್ತೆಗಾಗಿ ಗೋವಾ ಪೊಲೀಸರು ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದಾಗ ಆಕೆ ಮಂಗಳೂರಿನಲ್ಲಿರುವುದು ಪತ್ತೆಯಾಗಿತ್ತು. ತಕ್ಷಣವೇ ಕ್ಯಾಲಂಗುಟ್ ಪೊಲೀಸ್ ತಂಡ ಮಂಗಳೂರಿಗೆ ಧಾವಿಸಿತು. ಅಷ್ಟರಲ್ಲೇ ಆಕೆ ಅಲ್ಲಿಂದ ಬೆಂಗಳೂರಿಗೆ ಎಸ್ಕೇಪ್ ಆಗಿದ್ದಳು. ತಕ್ಷಣ ಕಾರ್ಯಪ್ರವೃತ್ತರಾದ ಗೋವಾ ಪೊಲೀಸರು ಕರ್ನಾಟಕ ಪೊಲೀಸರ ಸಹಾಯದೊಂದಿಗೆ ಜುಲೈ 3ರ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಆರೋಪಿ ರೂಪಶ್ರೀಯನ್ನು ಹೆಡೆಮುರಿ ಕಟ್ಟಿದ್ದಾರೆ. ನಂತರ ಟ್ರಾನ್ಸಿಟ್ ರಿಮಾಂಡ್ ಮೂಲಕ ಶುಕ್ರವಾರ ಸಂಜೆಯೇ ಆಕೆಯನ್ನು ಗೋವಾಕ್ಕೆ ಕರೆದೊಯ್ಯಲಾಗಿದೆ.

ವಿಚಾರಣೆ ವೇಳೆ ಆರೋಪಿ ರೂಪಶ್ರೀ ತನ್ನ ಕರಾಳ ದಂಧೆಯನ್ನು ಒಪ್ಪಿಕೊಂಡಿದ್ದಾಳೆ. ಈಕೆ ಗೋವಾದ ಕ್ಯಾಸಿನೋಗಳಲ್ಲಿ ಶ್ರೀಮಂತ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದಳು. ಲೈಂಗಿಕ ಸೇವೆಗಳ ಆಮಿಷ ಒಡ್ಡಿ ಅವರನ್ನು ತನ್ನ ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ ಹೋಟೆಲ್ ರೂಮ್ಗಳಿಗೆ ಕರೆಯಿಸುತ್ತಿದ್ದಳು. ಅಲ್ಲಿ ಅವರಿಗೆ ಮದ್ಯದಲ್ಲಿ ಅತಿಯಾದ ನಿದ್ರಾಜನಕ ಮಾತ್ರೆ ಅಥವಾ ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿಸಿ, ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದಳು. ಉದ್ಯಮಿ ಸಂದೀಪ್ ಅವರಿಗೂ ದರೋಡೆ ಮಾಡುವ ಉದ್ದೇಶದಿಂದಲೇ ಅತಿಯಾದ ಮಾದಕ ದ್ರವ್ಯ ನೀಡಿದ್ದರಿಂದ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಮಹಿಳೆ ಗುಜರಾತ್ ಉದ್ಯಮಿ ತೋಮೇಶ್ ಯಾದವ್ ಅವರನ್ನು ಹೋಟೆಲ್ನಲ್ಲಿ ಇದೇ ರೀತಿ ಪ್ರಜ್ಞಾಹೀನರನ್ನಾಗಿ ಮಾಡಿ 2.40 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಳು. ಈ ಶಂಕಿತ ಮಹಿಳೆಯ ವಿರುದ್ಧ ಪಣಜಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕಳ್ಳತನದ ಪ್ರಕರಣ ದಾಖಲಾಗಿದೆ.
ಈಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಮತ್ತು ಭೀಕರ ದರೋಡೆ ಕೇಸ್ ದಾಖಲಿಸಲಾಗಿದೆ. ಈಕೆ ಈಗಾಗಲೇ ಗೋವಾ ಹಾಗೂ ಇತರ ರಾಜ್ಯಗಳಲ್ಲಿ ಇಂತಹ ಹಲವು ಸರಣಿ ಹನಿಟ್ರ್ಯಾಪ್ ದರೋಡೆ ನಡೆಸಿರುವುದು ಪತ್ತೆಯಾಗಿದೆ. ಈಕೆಯಿಂದ ವಂಚನೆಗೊಳಗಾದವರು ಮುಂದೆ ಬಂದು ದೂರು ನೀಡುವಂತೆ ಗೋವಾ ಪೊಲೀಸರು ಮನವಿ ಮಾಡಿದ್ದಾರೆ.