ಉಡುಪಿ ಜನವರಿ 19: ಕಾಲ್ಗೆಜ್ಜೆ ಕಳೆದುಕೊಂಡಿದ್ದ ಬಾಲಕಿಗೆ ಆಕೆಯ ತಾಯಿ ಬೈದಿದ್ದಾರೆ ಎಂಬ ಕಾರಣಕ್ಕೆ ನೇಣಿ ಬಿಗಿದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಬೀಡನಗುಡ್ಡೆ ಬಳಿಯಿರುವ ಗುಂಡುಶೆಟ್ಟಿ ಕಾಂಪೌಂಡ್ ನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಭರ್ಮವ್ವ (15) ಎಂದು ಗುರುತಿಸಲಾಗಿದೆ. ಬಾಲಕಿ ತನ್ನ ತಾಯಿ ಗಂಗಮ್ಮ(45) ಜೊತೆ ಬೀಡನಗುಡ್ಡೆ ಬಳಿಯಿರುವ ಗುಂಡುಶೆಟ್ಟಿ ಕಾಂಪೌಂಡ್ ನಲ್ಲಿ ವಾಸ ಮಾಡಿಕೊಂಡಿದ್ದಳು, ದಿನಾಂಕ:18/01/2026 ರಂದು ಭರ್ಮವ್ವ ತನ್ನ ತಾಯಿಗೆ ಕರೆ ಮಾಡಿ ನನ್ನ ಕಾಲ್ಗೆಜ್ಜೆ ಕಳೆದುಹೋಗಿದೆ ಎಂದು ಹೇಳಿದ್ದಾಳೆ. ಅದಕ್ಕೆ ಅವರ ತಾಯಿ “ಬಾಗಲಕೋಟೆಯಲ್ಲಿರುವ ನಿನ್ನ ತಂದೆ ಬಳಿಗೆ ಹೋಗು, ಕಳೆದುಹೋದ ಕಾಲ್ಗೆಜ್ಜೆಯನ್ನು ಹೇಗೆ ಸಂಪಾದನೆ ಮಾಡೋದು” ಎಂದು ಬೈದಿದ್ದಾರೆ.
ಬಳಿಕ ತಾಯಿ ಕೆಲಸ ಮುಗಿಸಿ ವಾಪಸ್ಸು ಮನೆಗೆ ಬಂದ ಮೇಲೆ ಮಗಳು ಭರ್ಮವ್ವ ಊಟ ಮಾಡಿ ಒಟ್ಟಿಗೆ ಮಲಗಿಕೊಂಡಿರುತ್ತಾರೆ. ಇಂದು ಎಂದಿನಂತೆ 7:00 ಗಂಟೆಗೆ ಬಾಲಕಿ ತಾಯಿ ಗಂಗಮ್ಮ ಕೆಲಸಕ್ಕೆ ಹೋಗಿದ್ದಾರೆ. ಈ ವೇಳೆ ಬಾಲಕಿ ಭರ್ಮವ್ವ ಮನೆಯಲ್ಲಿಯೇ ಇದ್ದಳು. ಮಧ್ಯಾಹ್ನ 12 ಗಂಟೆಗೆ ನೆರಹೊರೆಯವರು ಬಾಲಕಿ ತಾಯಿ ಗಂಗಮ್ಮಗೆ ಕರೆ ಮಾಡಿ ನಿಮ್ಮ ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯು ಡಿ ಆರ್ ಕ್ರಮಾಂಕ:004/2026, ಕಲಂ: 194 ಬಿ ಎನ್ ಎಸ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.