LATEST NEWS
ಉಡುಪಿ ಗಾಂಜಾ ಮಾರಾಟಕ್ಕೆ ಯತ್ನ ನಾಲ್ವರು ಆರೆಸ್ಟ್
ಉಡುಪಿ ಸೆಪ್ಟೆಂಬರ್ 19: ಉಡುಪಿ ಜಿಲ್ಲೆಯಲ್ಲಿ ಗಾಂಜಾ ಬೇಟೆ ಮುಂದುವರಿದಿದೆ. ನಿನ್ನೆ ರಾತ್ರಿ ಬೈಂದೂರು ತಾಲೂಕಿನ ಮರವಂತೆಯಲ್ಲಿ 20 ಕೆ.ಜಿ 630 ಗ್ರಾಂ ತೂಕದ ಗಾಂಜಾ ವಶಪಡಿಸಿದ ಜಿಲ್ಲಾ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ದಕ್ಷಿಣಕನ್ನಡ ಜಿಲ್ಲೆಯ ಹರೇಕಳ ನಿವಾಸಿಗಳಾದ ಮಹಮ್ಮದ್ ಸಾಕೀರ್(24), ಮಹಮ್ಮದ್ ಜಾಫರ್(32), ಬೈಂದೂರು ಕಿರಿಮಂಜೇಶ್ವರ ಗ್ರಾಮ ನಿವಾಸಿ ಅಲ್ಫಾಜ್(20) ಮತ್ತು ಉ.ಕ. ಜಿಲ್ಲೆ ಹೊನ್ನಾವರ ನಿವಾಸಿ ಮಹಮ್ಮದ್ ಇಸೂಫ್ ಸಾಬ್(45) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಆಧಾರದ ಮೇರೆಗೆ ಗಂಗೊಳ್ಳಿ ಪಿ.ಎಸ್.ಐ. ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು, ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಆಗಮಿಸುತ್ತಿದ್ದ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮರವಂತೆ ಮಸೀದಿ ಬಳಿ ತಡೆದು ತಪಾಸಣೆ ನಡೆಸಿದ್ದಾರೆ.
ಆ ವೇಳೆ ಅದರಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ವಾಹನದಲ್ಲಿ 20 ಕೆಜಿ 630 ಗ್ರಾಂ ತೂಕದಷ್ಟು ಗಾಂಜಾ ದೊರೆತಿದೆ. ನಾಲ್ವರು ಆರೋಪಿಗಳು ಗಾಂಜಾ ಸೇವನೆ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಅವರು ಭಟ್ಕಳದಿಂದ ಗಾಂಜಾ ಮಾರಾಟ ಮಾಡುತ್ತಾ ಬಂದಿರುವ ವಿಚಾರ ಗೊತ್ತಾಗಿದೆ.
ಆರೋಪಿಗಳಿಂದ ಗಾಂಜಾ, ಐದು ಮೊಬೈಲ್ ಸೆಟ್ಗಳು, ಇನ್ಸುಲೇಟರ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 14.45 ಲಕ್ಷ ರೂ. ಆಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
You must be logged in to post a comment Login