ನವದೆಹಲಿ,ಮಾರ್ಚ್ 30: ವಿಶ್ವದ ವಾಣಿಜ್ಯ ಭೂಪಟದಲ್ಲಿ ಅತ್ಯಂತ ಆಯಕಟ್ಟಿನ ಕೇಂದ್ರಗಳೆನಿಸಿರುವ ಹಾರ್ಮುಜ್ ಮತ್ತು ಬಾಬ್ ಅಲ್-ಮಂದಬ್ ಜಲಸಂಧಿಗಳು ಏಕಕಾಲಕ್ಕೆ ಬಿಕ್ಕಟ್ಟಿಗೆ ಸಿಲುಕಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹಾಗೂ ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ನಿರಂತರ ದಾಳಿಯಿಂದಾಗಿ ಜಗತ್ತು ಈಗ ‘ಡಬಲ್ ಶಾಕ್’ ಎದುರಿಸುವ ಆತಂಕದಲ್ಲಿದೆ ಎಂದು ವಿವಿಧ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪರ್ಷಿಯನ್ ಗಲ್ಫ್ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುವ ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ಪ್ರಮುಖ ನಾಳವಾಗಿದೆ. ವಿಶ್ವದ ಒಟ್ಟು ತೈಲದ ಸುಮಾರು ಶೇ. 30ರಷ್ಟು ಭಾಗ ಈ ಕಿರಿದಾದ ಮಾರ್ಗದ ಮೂಲಕವೇ ಸಾಗಣೆಯಾಗುತ್ತದೆ. ಸದ್ಯದ ಯುದ್ಧದ ಪರಿಸ್ಥಿತಿಯಲ್ಲಿ ಇರಾನ್ ಈ ಮಾರ್ಗವನ್ನು ಬಂದ್ ಮಾಡುವ ಎಚ್ಚರಿಕೆ ನೀಡಿರುವುದು, ಕಚ್ಚಾ ತೈಲದ ಬೆಲೆ ಗಗನಕ್ಕೇರಲು ಕಾರಣವಾಗಬಹುದು. ಇದು ಭಾರತದಂತಹ ಆಮದು ಅವಲಂಬಿತ ದೇಶಗಳ ಇಂಧನ ಭದ್ರತೆಯ ಮೇಲೆ ನೇರ ಪರಿಣಾಮ ಬೀರಲಿದೆ.
ಹಾರ್ಮುಜ್ ಜಲಸಂಧಿಯ ಆತಂಕದ ನಡುವೆಯೇ, ಈಗ ಬಾಬ್ ಅಲ್-ಮಂದಬ್ ಜಲಸಂಧಿಯೂ ಅಪಾಯದ ಸುಳಿಗೆ ಸಿಲುಕಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಮಾರ್ಗದಲ್ಲಿ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವುದರಿಂದ, ಸರಕು ಸಾಗಣೆ ಸಂಸ್ಥೆಗಳು ಅನಿವಾರ್ಯವಾಗಿ ದೀರ್ಘ ಮಾರ್ಗವನ್ನು ಅನುಸರಿಸುತ್ತಿವೆ. ಸುಯೆಜ್ ಕಾಲುವೆಯ ಬದಲಾಗಿ ಆಫ್ರಿಕಾ ಖಂಡವನ್ನು ಸುತ್ತುವರಿದು ಹಡಗುಗಳು ಸಂಚರಿಸುತ್ತಿರುವುದರಿಂದ ಪ್ರಯಾಣದ ಅವಧಿ 10 ರಿಂದ 15 ದಿನಗಳಷ್ಟು ಹೆಚ್ಚಾಗಿದೆ.
ಈ ‘ಡಬಲ್ ಶಾಕ್’ ಕೇವಲ ದೇಶಗಳ ನಡುವಿನ ಸಂಘರ್ಷಕ್ಕೆ ಸೀಮಿತವಾಗಿಲ್ಲ; ಇದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಲಿದೆ. ಹಡಗುಗಳ ಸಾಗಣೆ ವೆಚ್ಚ ಮತ್ತು ವಿಮೆ ಮೊತ್ತ ದುಪ್ಪಟ್ಟಾಗುತ್ತಿರುವುದರಿಂದ ಎಲೆಕ್ಟ್ರಾನಿಕ್ಸ್, ಆಹಾರ ಧಾನ್ಯಗಳು, ಔಷಧಿಗಳು ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ತಜ್ಞರ ಪ್ರಕಾರ, ಈ ಬಿಕ್ಕಟ್ಟು ಶಮನವಾಗದಿದ್ದರೆ ಜಗತ್ತು 1970ರ ದಶಕದ ಮಾದರಿಯ ತೀವ್ರ ಆರ್ಥಿಕ ಹಿಂಜರಿತವನ್ನು ಎದುರಿಸಬೇಕಾಗಬಹುದು.
ಜಾಗತಿಕ ಪೂರೈಕೆ ಸರಪಳಿ (Global Supply Chain) ಸಂಪೂರ್ಣವಾಗಿ ಹಳಿ ತಪ್ಪದಂತೆ ತಡೆಯಲು ಅಂತರಾಷ್ಟ್ರೀಯ ಸಮುದಾಯವು ತುರ್ತಾಗಿ ಮಧ್ಯಪ್ರವೇಶಿಸಬೇಕಿದೆ. ಭಾರತದಂತಹ ದೇಶಗಳು ತನ್ನ ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಪರ್ಯಾಯ ಮಾರ್ಗಗಳತ್ತ ಗಮನ ಹರಿಸುತ್ತಿವೆ. ಮುಂಬರುವ ದಿನಗಳಲ್ಲಿ ಈ ಜಲಸಂಧಿಗಳ ಮೇಲಿನ ನಿಯಂತ್ರಣ ಮತ್ತು ಭದ್ರತೆಯು ಜಾಗತಿಕ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸಲಿದೆ.