ಮುಂಬೈ ಮಾರ್ಚ್ 31: ಸಣ್ಣ ವಿಷಯಕ್ಕೆ ನಡೆದ ಜಗಳವೊಂದು ಅಮಾನವೀಯ ಹಂತಕ್ಕೆ ತಲುಪಿದ್ದು, ವ್ಯಕ್ತಿಯೊಬ್ಬ ತನ್ನ ಎದುರಾಳಿಯ ನಾಲ್ಕು ವರ್ಷದ ಮಗುವನ್ನು ನೆಲಕ್ಕೆ ಎಸೆದು, ಕಬ್ಬಿಣದ ರಾಡ್ಗೆ ತಲೆ ಅಪ್ಪಳಿಸಿ ಕೊಲೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ವಸೈನಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಾಲಕ ವಿಘ್ನೇಶ್ ಪ್ರಸ್ತುತ ಮೀರಾ ರಸ್ತೆಯ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ವಸತಿ ಸೊಸೈಟಿಯ ಆವರಣದಲ್ಲಿ ಮಗು ಆಟೋರಿಕ್ಷಾದಲ್ಲಿ ಕುಳಿತು ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆರೋಪಿ ಸಂದೀಪ್ ಪವಾರ್, ಮಗುವಿನ ತಂದೆಯೊಂದಿಗೆ ಜಗಳವಾಡಿದ ನಂತರ ನೇರವಾಗಿ ಆಟೋ ಬಳಿ ಬಂದು, ಮಗುವಿನ ಕಾಲುಗಳನ್ನು ಹಿಡಿದು ಎಳೆದು ಹೊರಹಾಕಿದ್ದಾನೆ. ನಂತರ ಮಗುವನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಲ್ಲದೆ, ಕಟ್ಟಡದ ಒಳಗಿದ್ದ ಕಬ್ಬಿಣದ ರಾಡ್ಗೆ ಮಗುವಿನ ತಲೆಯನ್ನು ಬಲವಾಗಿ ಚಚ್ಚಿದ್ದಾನೆ.
ಈ ಕ್ರೂರ ದೃಶ್ಯಗಳು ಸೊಸೈಟಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಬೆನ್ನಲ್ಲೇ ಪೊಲೀಸರು ಆರೋಪಿ ಸಂದೀಪ್ ಪವಾರ್ನನ್ನು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.