ಗಾಜಿಯಾಬಾದ್ ಮಾರ್ಚ್ 16: 2013ರಿಂದ ಕೋಮಾ ಸ್ಥಿತಿಯಲ್ಲಿರುವ ಹರೀಶ್ ರಾಣಾಗೆ ದಯಾಮರಣ ಕಲ್ಪಿಸಲು ಸುಪ್ರೀಂ ಕೋರ್ಟ್ ಕಳೆದವಾರ ಅನುಮತಿ ನೀಡಿತು. ಇದರ ಬೆನ್ನಲ್ಲೇ ಗಾಜಿಯಾಬಾದ್ನಲ್ಲಿರುವ ಅಶೋಕ್ ರಾಣಾ ಹಾಗೂ ನಿರ್ಮಲಾ ದೇವಿ ಅವರ ಮನೆಯಿಂದ ಹರೀಶ್ಗೆ ಭಾವುಕ ವಿದಾಯ ಹೇಳಲಾಯಿತು ಕಣ್ಣೆದುರೇ ಉಸಿರಾಡುತ್ತಿರುವ ಮಗನನ್ನು ‘ಇನ್ನು ಹೋಗಿ ಬಾ’ ಎಂದು ಸಾವಿನ ಮನೆಗೆ ಕಳುಹಿಸಿಕೊಡುವ ಅನಿವಾರ್ಯತೆ ತಂದೆ-ತಾಯಿಗೆ ಬಂದರೆ? ಅಂತಹದೊಂದು ಕರುಣಾಜನಕ ಸ್ಥಿತಿಗೆ ಹರೀಶ್ ರಾಣಾ ಕುಟುಂಬ ಸಾಕ್ಷಿಯಾಗಿದೆ.

2013ರಲ್ಲಿ ಬಿ.ಟೆಕ್ ಓದುತ್ತಿದ್ದ ಹರೀಶ್, ವಸತಿಗೃಹದ 4ನೇ ಮಹಡಿಯಿಂದ ಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು. ಅಂದಿನಿಂದ ಇಂದಿನವರೆಗೆ, ಅಂದರೆ ಸತತ 13 ವರ್ಷಗಳ ಕಾಲ ಅವರು ಹಾಸಿಗೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮಗ ಚೇತರಿಸಿಕೊಳ್ಳಬಹುದು ಎಂಬ ಪೋಷಕರ ಭರವಸೆ ಕಾಲಕ್ರಮೇಣ ಅಸಹಾಯಕತೆಗೆ ತಿರುಗಿತ್ತು.
ಹರೀಶ್ ಅನುಭವಿಸುತ್ತಿರುವ ನರಕಯಾತನೆಯನ್ನು ಕಂಡು ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಕಳೆದ ವಾರವಷ್ಟೇ ‘ದಯಾಮರಣ’ಕ್ಕೆ (Passive Euthanasia) ಅನುಮತಿ ನೀಡಿದೆ.
ಇಂದು ಹರೀಶ್ ಅವರನ್ನು ಗಾಜಿಯಾಬಾದ್ನ ಮನೆಯಿಂದ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇಲ್ಲಿ ವೈದ್ಯರು ನೇರವಾಗಿ ಪ್ರಾಣ ತೆಗೆಯುವುದಿಲ್ಲ. ಬದಲಿಗೆ, ಜೀವರಕ್ಷಕ ಚಿಕಿತ್ಸೆಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತದೆ. ಕೃತಕ ಪೋಷಣೆ ಮತ್ತು ದ್ರವ ಪದಾರ್ಥಗಳನ್ನು ನಿಲ್ಲಿಸುವ ಮೂಲಕ ದೇಹವು ಸಹಜ ಅಂತ್ಯ ಕಾಣುವಂತೆ ಮಾಡಲಾಗುತ್ತದೆ. ಆದರೆ, ಈ ವೇಳೆ ಅವರಿಗೆ ನೋವಾಗದಂತೆ ‘ಉಪಶಮನ ಆರೈಕೆ’ (Palliative Care) ಮುಂದುವರಿಯಲಿದೆ.
ಮನೆಯಿಂದ ಹೊರಡುವ ಮುನ್ನ ನಡೆದ ದೃಶ್ಯಗಳು ಕಟು ಹೃದಯಿಗಳನ್ನೂ ಕಣ್ಣೀರಿಸುವಂತಿದ್ದವು. “ಮಗನನ್ನು ಕಳುಹಿಸಿಕೊಡಲು ಯಾರಿಗೂ ಇಷ್ಟವಿಲ್ಲ, ಅನಿವಾರ್ಯವಾಗಿ ಈ ನಿರ್ಧಾರ ಮಾಡಿದ್ದೇವೆ, ಎಲ್ಲರೂ ನಮ್ಮನ್ನು ಕ್ಷಮಿಸಿ” ಎಂದು ತಂದೆ ಅಶೋಕ್ ರಾಣಾ ಬಿಕ್ಕಿ ಬಿಕ್ಕಿ ಅತ್ತರು.
ಬ್ರಹ್ಮಕುಮಾರಿ ಕೇಂದ್ರದ ಕುಮಾರಿ ಲವ್ಲೀ ಅವರು ಹರೀಶ್ ಹಣೆಗೆ ತಿಲಕವಿಟ್ಟು, “ಹೊರಡುವ ಸಮಯ ಬಂದಿದೆ, ಎಲ್ಲರನ್ನೂ ಕ್ಷಮಿಸು, ಶಾಂತಿ ಪ್ರಾಪ್ತಿಯಾಗಲಿ” ಎಂದು ವಿದಾಯ ಹೇಳುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಮಾತು ಕೇಳಿ ಹರೀಶ್ ಕಣ್ಣು ಮಿಟುಕಿಸಿ, ಗಲ್ಲ ಅಲುಗಾಡಿಸಿದ್ದು ಅವರೂ ಮುಕ್ತಿಗಾಗಿ ಹಾತೊರೆಯುತ್ತಿದ್ದಾರೆಯೇ ಎಂಬಂತಿತ್ತು.