ಉಡುಪಿ ಫೆಬ್ರವರಿ 14: ಹೊಟೇಲ್ ಒಂದರಲ್ಲಿ ನಡೆದ ಕ್ಷುಲ್ಲಕ ಜಗಳದ ಬಳಿಕ ಕಾಂಗ್ರೇಸ್ ಯುವ ಮುಖಂಡನ ಮೇಲೆ ನಗರದ ಪಿಪಿಸಿ ಕ್ರಾಸ್ ಬಳಿ ತಲ್ವಾರ್ ನಲ್ಲಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಅಕ್ಷತ್ ಪೈ(27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಮತ್ತು ಶಶಾಂಕ್ ನಾಯಕ್(25) ಎಂದು ಗುರುತಿಸಲಾಗಿದೆ.
ಘಟನೆ ವಿವರ
ಶರತ್ ಕುಂದರ್ ಜನವರಿ 30ರಂದು ಸಂಜೆ 9 ಗಂಟೆ ಸುಮಾರಿಗೆ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೋಟೆಲ್ನಲ್ಲಿ ಅವರ ಕೈ ಆರೋಪಿಗಳ ಪೈಕಿ ಒಬ್ಬರ ಕೈಗೆ ತಾಗಿದೆ. ಈ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿತ್ತು. ಬಳಿಕ ಮನೆ ಕಡೆಗೆ ಶರತ್ ತೆರಳುತ್ತಿದ್ದ ವೇಳೆ ಹೋಟೆಲ್ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ಆರೋಪಿಗಳಲ್ಲಿ ಒಬ್ಬ ತಿಳಿಸಿದ್ದಾನೆ.
ಶರತ್ ಕುಂದರ್ ಪಿಪಿಸಿ ಕ್ರಾಸ್ ಬಳಿ ಬಂದಾಗ ಏಕಾಏಕಿ ಟಾಟಾ ಸಫಾರಿ ಮತ್ತು ಮಹೀಂದ್ರಾ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳ ತಂಡ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ತಲ್ವಾರ್ ಮತ್ತು ಕಬ್ಬಿಣದ ಚೇರ್ಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯನ್ನು ತಡೆಯಲು ಹೋದ ಶರತ್ ಅವರ ಬಲ ಅಂಗೈ, ಮಧ್ಯದ ಬೆರಳು ಮತ್ತು ಎಡಕೈ ಮಣಿಕಟ್ಟಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ, ಸ್ಥಳದಲ್ಲಿದ್ದ ಶರತ್ ಅವರ ಸ್ನೇಹಿತರು ಬೊಬ್ಬೆ ಹೊಡೆದಾಗ, ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು.

ಗಾಯಾಳು ಶರತ್ ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷರು ಮತ್ತು ಸಿಬ್ಬಂದಿಗಳ ತಂಡ, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಯಲ್ಲಾಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಅಂದಾಜು 8 ಲಕ್ಷ ರೂ. ಮೌಲ್ಯದ ಹುಂಡೈ ವೆನ್ಯೂ ಕಾರು ಮತ್ತು ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.