LATEST NEWS
ಕೋಟೇಶ್ವರ – ಆಕಸ್ಮಿಕ ಬೆಂಕಿಗೆ ಎರಡು ಅಂಗಡಿ ಸಂಪೂರ್ಣ ಸುಟ್ಟು ಭಸ್ಮ..!!
ಕುಂದಾಪುರ ಜನವರಿ 10: ಆಕಸ್ಮಿಕ ಬೆಂಕಿ ಅವಘಡಕ್ಕೆ ಎರಡು ಫ್ಯಾನ್ಸಿ ಸ್ಟೋರ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವವಸ್ಥಾನ ಬಳಿ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ ಪಕ್ಕದಲ್ಲೇ ಇದ್ದ ಬಟ್ಟೆಯಂಗಡಿ, ವಾಸದ ಮನೆ ಭಾಗಶಹ ಸುಟ್ಟು ಹೋಗಿದೆ.
ಕೋಟೇಶ್ವರ ಶಿವರಾಮ ಪೂಜಾರಿ ಎಂಬರಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಬಾಡಿಗೆ ಇದ್ದ ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ ಎರಡು ಶ್ಯಾಪ್, ಸುಧಾಕರ ಜೋಗಿ ಅಂಗಡಿ ತಾಗಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಶ್ಯಾಪ್, ಶಿವರಾಮ ಪೂಜಾರಿ ವಾಸದ ಮನೆ ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಧಾಕರ ಜೋಗಿ ಎಂಬವರಿಗೆ ಸೇರಿದ ಫ್ಯಾನ್ಸಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಫ್ಯಾನ್ಸಿ ಹಾಗೂ ಪ್ಲಾಸ್ಟಿಕ್ ಐಟಮ್ ಇದ್ದುದ್ದರಿಂದ ಬೆಂಕಿ ಕ್ಷಿಪ್ರಗತಿಯಲ್ಲಿ ಇಡೀ ಅಂಗಡಿ ಕೋಣೆ ಆವರಿಸಿ, ನೋಡು ನೀಡುತ್ತಿದ್ದಂತೆ ಎಲ್ಲವೂ ಭಸ್ಮವಾಗಿದೆ. ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ ಸ್ಟೋರ್ ಎರಡು ಮಳಿಗೆ ತಾಗಿಕೊಂಡಿದ್ದು, ರಾಜೀವ ಶೆಟ್ಟಿ ಎಂಬವರಿಗೆ ಸೇರಿದ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಅಂಗಡಿಗೂ ಬೆಂಕಿ ವಿಸ್ತಿರಿಸಿಕೊಂಡಿದೆ. ಅಂಗಡಿ ಮೇಲ್ಬಾಗದಲ್ಲಿರುವ ಶಿವರಾಮ ಪೂಜಾರಿ ವಾಸದ ಮನೆ ನೆಲ ಹಾಸು, ಶೆಟರ್, ಕಿಟಕಿ ಸುಟ್ಟು ಹೋಗಿದೆ. ಪ್ಯಾನ್ಸಿ ಸ್ಟೋರ್ನಲ್ಲಿದ್ದ 3 ಲಕ್ಷ ನಗದು ಹಾಗೂ ಸುಟ್ಟ ಪರಿಕರದ ಮೌಲ್ಯ 60 ಲಕ್ಷ ರೂ ಆಗಿದ್ದು, ಬಟ್ಟೆಯಂಗಡಿ ಮಾಲೀಕರಿಗೆ 3 ಲಕ್ಷ ಹಾಗೂ ವಾಸದ ಮನೆಗೆ 8 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಮಧ್ಯಾಹ್ನ 2.30ಕ್ಕೆ ಸುಮಾರಿಗೆ ಬೆಂಕಿ ಕಾಣಿಸಿದ್ದು, ಪರಿಸರದ ನಾಗರಿಕರು ಅಗ್ನಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಪರಿಸರವಾಸಿಗಳು ಹರಸಾಹಸದಿಂದ ಸಂಜೆ ಆರುಗಂಟೆ ಸಮಾರಿಗೆ ಅಗ್ನಿ ಹಿಡಿತಕ್ಕೆ ತರಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.
You must be logged in to post a comment Login