ಬೆಳ್ತಂಗಡಿ ಸೆಪ್ಟೆಂಬರ್ 17: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯ ನೀಡಿದ ಮಾಹಿತಿಯಂತೆ ಎಸ್ಐಟಿ ತಂಡ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆ ಶೋಧ ಮಾಡಲು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಅಗಸ್ಟ್ 26 ರಂದು ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಅವರ ಮನೆಯಲ್ಲಿ 2 ತಲವಾರ್ ಮತ್ತು ಒಂದು MOD-65, DAW’S A060 CAL.22/5.5 MM ಬಂದೂಕನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಸಿಕ್ಕಿರುವ ಸ್ವತ್ತುಗಳನ್ನು ಸ್ವಾದೀನ ಪಡಿಸಿಕೊಂಡು ಮುಂದಿನ ಕಾನೂನು ಕ್ರಮದ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ಸಂಬಂಧ ಎಸ್.ಐ.ಟಿ ಎಸ್ಪಿ ಸಿ.ಎ.ಸೈಮನ್ ಅವರು ಸೆಪ್ಟೆಂಬರ್ 16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಿಮರೋಡಿ ಮನೆಯಲ್ಲಿ ಅಕ್ರವಾಗಿ ಸಂಗ್ರಹಿಸಿಟ್ಟಿದ್ದ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾದ ಬಗ್ಗೆ ಮುಂದಿನ ತನಿಖೆ ನಡೆಸಲು ಮಹೇಶ್ ಶೆಟ್ಟಿ ವಿರುದ್ಧ ದೂರು ನೀಡಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಗೆ ಎಸ್.ಐ.ಟಿ ಎಸ್ಪಿ ಸಿ.ಎ.ಸೈಮನ್ ನೀಡಿದ ದೂರಿನ ಮೇರೆಗೆ ARMS ACT 1959(U/S-25(1),25(1-A),24(1-B)(a)) ಅಡಿಯಲ್ಲಿ ಮಹೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



