ಬೆಂಗಳೂರು, ಮಾರ್ಚ್ 18: ಪ್ರ್ಯಾಂಕ್ ಮಾಡೋಕೆ ಜೀವಂತ ವ್ಯಕ್ತಿಯನ್ನು ಚೀಲದಲ್ಲಿ ತುಂಬಿಸಿ, ಮಂಗಳೂರಿಗೆ ಕೊರಿಯರ್ ಮೂಲಕ ಪಾರ್ಸೆಲ್ ಮಾಡಲು ಬಂದಿರುವ ಘಟನೆ ವೈಯಾಲಿಕಾವಲ್ನಲ್ಲಿ ನಡೆದಿದೆ.
ಮಾರ್ಚ್ 17 ಸಂಜೆ 4:30ರ ಸುಮಾರಿಗೆ ಬಿಳಿಬಣ್ಣದ ಮೂಟೆಯೊಂದಿಗೆ ನಾಲ್ವರು ವೈಯಾಲಿಕಾವಲ್ನಲ್ಲಿರುವ ಕೊರಿಯರ್ ಆಫೀಸ್ಗೆ ಬಂದಿದ್ದರು. ಇದನ್ನು ಮಂಗಳೂರಿಗೆ ಕಳುಹಿಸಬೇಕೆಂದು ಕೊರಿಯರ್ ಸಿಬ್ಬಂದಿಗೆ ಹೇಳಿದ್ದಾರೆ. ಮೂಟೆ ಅಲುಗಾಡ್ತಿರೋದು ನೋಡಿ ಕೊರಿಯರ್ ಕಚೇರಿಯಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಗಾಬರಿಯಾಗಿದ್ದಾರೆ. ಮೂಟೆಯನ್ನ ಓಪನ್ ಮಾಡಿದಾಗ ವೃದ್ದನೊಬ್ಬ ಮೂಟೆಯಿಂದ ಎದ್ದು ಹೊರ ನಡೆದಿದ್ದಾರೆ.
ವೃದ್ಧ ಹೊರನಡೆಯುತ್ತಿದ್ದಂತೆ ಕೊರಿಯರ್ ಪಾರ್ಸೆಲ್ ಮಾಡಲು ಬಂದಿದ್ದ ಇಬ್ಬರು ಮಹಿಳೆಯರು, ಪುರುಷರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮೂಟೆಯಲ್ಲಿದ್ದ ವ್ಯಕ್ತಿಗೆ ಮಾತನಾಡಲು ಕೂಡ ಬರುತ್ತಿರಲಿಲ್ಲ. ಈ ಬಗ್ಗೆ ಕೊರಿಯರ್ ಆಫೀಸ್ನ ಸಿಬ್ಬಂದಿ ಭಯಪಟ್ಟಿದ್ದು, ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಫ್ಯಾಮಿಲಿ `ಮಾಂಕ್ ಪ್ರಾಂಕ್’ ಎಂಬ ಅಕೌಂಟ್ನ್ನು ಹೊಂದಿದ್ದು, ಗಂಡ, ಹೆಂಡತಿ, ಅತ್ತೆ, ಮಾವ ಮತ್ತು ಮೈದುನ ಸೇರಿಕೊಂಡು ರೀಲ್ಸ್, ಪ್ರ್ಯಾಂಕ್ ಮಾಡುತ್ತಿರುತ್ತಾರೆ. ಈ ಬಗ್ಗೆ ಕುಟುಂಬಸ್ಥರು ಮಾಧ್ಯಮದ ಜೊತೆ ಮಾತನಾಡಿ, ನಾವು ಬಸ್ ರಶ್ ವಿಚಾರದಲ್ಲಿ ಪ್ರ್ಯಾಂಕ್ ಮಾಡಲು ಹೋಗಿದ್ವಿ, ಅದು ಈ ರೀತಿ ತಪ್ಪಾಗುತ್ತೆ ಅಂತಾ ಗೊತ್ತಿರಲಿಲ್ಲ. ನಾವು ತಪ್ಪು ಮಾಡಿದ್ದೇವೆ, ಅದರಿಂದ ಹೀಗೆ ಕಷ್ಟ ಆಗುತ್ತೆ ಅಂತಾ ಗೊತ್ತಿರಲಿಲ್ಲ. ಪೊಲೀಸರು ಕರೆಸಿ ಬುದ್ಧಿ ಹೇಳಿದ್ರು, ಇನ್ಮುಂದೆ ಈ ರೀತಿ ನಾವು ಮಾಡಲ್ಲ. ಯಾರು ರೀತಿ ನೀವು ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.