Connect with us

    KARNATAKA

    ಶಿವಮೊಗ್ಗ ಹುಣಸೋಡು ಗ್ರಾಮದ ಬಳಿ ಕ್ರಷರ್​ನಲ್ಲೂ ಸ್ಫೋಟ, 15 ಕಾರ್ಮಿಕರ ಸಾವು?

    ಶಿವಮೊಗ್ಗ, ಜನವರಿ 22: ಮಲೆನಾಡಿನಲ್ಲಿ ಗುರುವಾರ ರಾತ್ರಿ ಭೀಕರ ಸ್ಪೋಟದ ಸದ್ದು ಕೇಳಿ ಬಂದ ಸಮಯದಲ್ಲೇ ಕ್ರಷರ್​ನಲ್ಲೂ ಸ್ಫೋಟ ಸಂಭವಿಸಿದೆ. ಸವಳಂಗ ರಸ್ತೆಯಲ್ಲಿ ಬರುವ ವಿವಿಧ ಬಡಾವಣೆಗಳು, ಇಂಜಿನಿಯರಿಂಗ್ ಕಾಲೇಜು ಪ್ರದೇಶದಲ್ಲಿ ಬಿರುಗಾಳಿ ಜತೆಗೆ ಸ್ಪೋಟದ ಸದ್ದು ಕೇಳಿದೆ. ಸ್ಪೋಟದ ಭೀಕರತೆಗೆ ಘಟನಾ ಸ್ಥಳ ಸಮೀಪದಲ್ಲಿರುವ ಜನರ ಕಿವಿಗಳು ಕೇಳಿಸದಂತಾಗಿವೆ ಎಂದು ಗೊತ್ತಾಗಿದೆ. ಕ್ರಷರ್​ನಲ್ಲಿ ಸ್ಫೋಟ ಸಂಭವಿಸಿದ್ದರೂ ಭೂಕಂಪನದ ಅನುಭವ ಇರಬೇಕು ಎಂದು ಬಹುತೇಕರು ಭಾವಿಸಿದ್ದರು. ಹೀಗಾಗಿ ಈ ಘಟನೆ ತಕ್ಷಣಕ್ಕೆ ಬೆಳಕಿಗೆ ಬರಲಿಲ್ಲ.

    ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್​ನಲ್ಲಿ ಗುರುವಾರ ರಾತ್ರಿ 10.20ರ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದ್ದು, ಬಿಹಾರ ಮೂಲದ 8 ಕಾರ್ವಿುಕರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಎಷ್ಟು ಜನ ಇದ್ದರು ಎಂಬುದು ಗೊತ್ತಾಗಿಲ್ಲ. ಮೃತ ದೇಹಗಳು ಅಲ್ಲಲ್ಲಿ ಛಿದ್ರಗೊಂಡು ಬಿದ್ದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಸ್ಪೋಟದಿಂದಲೇ ದುರಂತ ಸಂಭವಿಸಿರುವುದು ದೃಢಪಟ್ಟಿದೆ.

    ಆದರೆ ಸ್ಪೋಟಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಲಾರಿಯಲ್ಲಿ ಸ್ಪೋಟಕಗಳನ್ನು ತರಲಾಗಿದ್ದು, ಈ ಲಾರಿಯೇ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಸ್ಪೋಟದಿಂದಾಗಿ ಕೆಟ್ಟ ವಾಸನೆ ಉಂಟಾಗಿದ್ದು ಘಟನಾ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

    ಈ ಅಕ್ರಮ ಕ್ರಷರ್ ಗಳ ಹಾವಳಿ ಇಲ್ಲಿ ಮಿತಿ ಮೀರಿದ್ದು, ಇದರಿಂದಾಗಿ ಈ ಭಾಗದ ಗ್ರಾಮಸ್ಥರು ಬೇಸರಗೊಂಡಿದ್ದಾರೆ. ಈಗಲಾದರೂ, ಅಕ್ರಮ ಕ್ರಷರ್ ಗಳು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಈ ಸ್ಫೋಟದಿಂದಾಗಿ ಒಂದು ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸುಮಾರು 15 ಕ್ಕೂ ಹೆಚ್ಚು ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಸಾವನಪ್ಪಿದ್ದು, ಇಡೀ ಪ್ರದೇಶ ಧೂಳಿನಿಂದ ಆವೃತಗೊಂಡಿದೆ. ಅಷ್ಟೇ ಅಲ್ಲ ಕ್ರಷರ್ ನಲ್ಲಿದ್ದ ಮರಗಳು ಸಂಪೂರ್ಣವಾಗಿ ಮುರಿದು ಹೋಗಿವೆ. ಸ್ಫೋಟದ ತೀವ್ರತೆಗೆ ಇಡೀ ಕ್ರಷರ್ ಸೇರಿದಂತೆ, ಅಕ್ಕಪಕ್ಕದ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply