ಮಂಗಳೂರು ಜನವರಿ 17: ಉಳ್ಳಾಲ ಸಯ್ಯದ್ ಮದನಿ ದರ್ಗಾ ಆಡಳಿತ ಕಮಿಟಿಯ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದು, ಸದ್ಯ ಇರುವ ಆಡಳಿತ ಮಂಡಳಿ ವಿರುದ್ದ ಸಮಿತಿಯ ಸದಸ್ಯರೆ ನ್ಯಾಯಾಲಯಕ್ಕೆ ತೆರಳಿದ್ದು, ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಹೈಕೋರ್ಟ್ 30 ದಿನಗಳ ಒಳಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದೆ. ಆದರೆ ದರ್ಗಾ ಕಮಿಟಿಯ ಪದಾಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಹಾಸಭೆಯನ್ನು ಕರೆದಿದ್ದಾರೆ ಎಂದು ಆಡಳಿತ ಸಮಿತಿಯ ಸದಸ್ಯ ಫಾರೂಕ್ ಯು.ಹೆಚ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ದರ್ಗಾ ಕಮಿಟಿಯಲ್ಲಿ ಅವ್ಯವಹಾರ ನಡೆದಿದ್ದು, ಸರಿಯಾದ ಲೆಕ್ಕಪತ್ರ ನೀಡದೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿ ಆಡಳಿತ ಸಮಿತಿಯ ಹೆಚ್ಚಿನ ಸದಸ್ಯರು ಜಿಲ್ಲಾ ಹಾಗೂ ರಾಜ್ಯ ವಕ್ಸ್ ಮಂಡಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ (W.P. No.15530/2025 – GM WAKF) . ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠವು 03-12-2025 ರಂದು ಮಹತ್ವದ ಆದೇಶ ನೀಡಿದೆ.
ಹೈಕೋರ್ಟ್ ತನ್ನ ಆದೇಶದಲ್ಲಿ, ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಹಾಗೂ ಮತಯಾಚನೆಗೆ ಸಂಬಂಧಿಸಿ 30 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು, ದೂರುಗಳ ಬಗ್ಗೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾ ವಕ್ಸ್ ಅಧಿಕಾರಿ ಅಬೂಬಕ್ಕರ್ ವಿರುದ್ಧ ರಾಜ್ಯ ವಕ್ಸ್ ಮಂಡಳಿಯ ಸಿಇಒ ತನಿಖೆ ನಡೆಸಿ ಅಗತ್ಯವಿದ್ದಲ್ಲಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಿದೆ.
ಉಳ್ಳಾಲ ದರ್ಗಾ ಕಮಿಟಿಯ ಅವ್ಯವಹಾರ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಹೇಳಿದ್ದರೂ ವಕ್ಫ್ ಮಂಡಳಿ ಮೌನ ವಹಿಸಿದೆ. ವಕ್ಷ್ ಮಂಡಳಿಯ ಸಿಇಓ ಅವರನ್ನು ಭೇಟಿ ಮಾಡಿ ಹೈಕೋರ್ಟ್ ಆದೇಶದ ಪ್ರತಿಯನ್ನು ನೀಡಿದ್ದರೂ ಕ್ರಮ ಜರುಗಿಸುತ್ತಿಲ್ಲ, ಅವರು ಯಾರ ಒತ್ತಡದಲ್ಲಿದ್ದಾರೆಂದು ಗೊತ್ತಿಲ್ಲ ಎಂದರು.
ಇದರ ನಡುವೆ, ದುರಾಡಳಿತ ಮತ್ತು ಹಣದ ಅವ್ಯವಹಾರದ ಬಗ್ಗೆ ತನಿಖೆ ನಡೆಯಬಹುದೆಂಬ ಭಯದಲ್ಲಿ ವಕ್ಫ್ ಬೈಲಾವನ್ನು ಉಲ್ಲಂಘಿಸಿ ಜ.18ರಂದು ದರ್ಗಾ ಕಮಿಟಿಯ ಮಹಾಸಭೆಯನ್ನು ಕರೆದಿದ್ದಾರೆ. ಮಹಾಸಭೆಯನ್ನು ನಡೆಸುವುದಿದ್ದರೆ ಎಲ್ಲ ಮತದಾರರಿಗೂ ಆಹ್ವಾನ ನೀಡಬೇಕಾಗುತ್ತದೆ. ಆದರೆ ಇಲ್ಲಿ ಸದಸ್ಯರಲ್ಲದ ಜಮಾತಿನ ಮಸೀದಿ ಕಮಿಟಿ ಅಧ್ಯಕ್ಷರಿಗೆ ಮಹಾಸಭೆಯ ನೋಟೀಸ್ ನೀಡಿದ್ದಾರೆ. ದರ್ಗಾ ಕಮಿಟಿಯ ಅವಧಿ ಇದೇ ಮಾರ್ಚ್ ತಿಂಗಳಿಗೆ ಕೊನೆಗೊಳ್ಳಲಿದ್ದು, ಇದಕ್ಕೂ ಮುನ್ನ ಮಹಾಸಭೆ ಕರೆಯುವುದು ಕಾನೂನು ಉಲ್ಲಂಘನೆಯಾಗುತ್ತದೆ. ಈಗಾಗಲೇ ವಕ್ಫ್ ಮಂಡಳಿಯ ಸಿಇಓ ದರ್ಗಾ ಕಮಿಟಿಯ ಅವ್ಯವಹಾರದ ಬಗ್ಗೆ ತನಿಖೆಗೆ ಮುಂದಾಗಿರುವುದು ತಿಳಿದುಬಂದಿದೆ. ದರ್ಗಾ ಮತ್ತು ಮಸೀದಿ ವಠಾರದಲ್ಲಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಪಡೆದು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದರ ಬಗ್ಗೆ ಮತ್ತು ಉರೂಸ್ ಖರ್ಚು ವೆಚ್ಚಗಳ ಬಗ್ಗೆ ಈವರೆಗೂ ಲೆಕ್ಕಪತ್ರಗಳನ್ನು ನೀಡಿರುವುದಿಲ್ಲ. ಈಗ ತನಿಖೆಯಾಗುತ್ತದೆ ಎಂಬ ಭಯದಲ್ಲಿ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಸೇರಿ ತರಾತುರಿಯಲ್ಲಿ ಮಹಾಸಭೆ ಕರೆದಿದ್ದಾರೆ ಎಂದು ಆರೋಪಿಸಿದರು.