BELTHANGADI
ಎಡ್ವರ್ಡ್ ಡಿಸೋಜ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಬೆಳ್ತಂಗಡಿ ಸೆಪ್ಟೆಂಬರ್ 04: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಪಟ್ಟಿಯನ್ನು ರಾಜ್ಯಸರಕಾರ ಬಿಡುಗಡೆಗೊಳಿಸಿದ್ದು, ಬೆಳ್ತಂಗಡಿಯ ಕಟ್ಟದಬೈಲು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಡ್ವರ್ಡ್ ಡಿಸೋಜ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
1992ರಲ್ಲಿ ಸರಳೀಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಿಂದ ವೃತ್ತಿ ಜೀವನ ಆರಂಭಿಸಿದ ಅವರು, 2003ರಿಂದ ಕಟ್ಟದಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಮನೆ ಮನೆಗೆ ಕಾಣಿಕೆ ಡಬ್ಬಿ ನೀಡಿ ಶಾಲೆಗಾಗಿ ದಿನಕ್ಕೊಂದು ರೂ. ನೀಡುವಂತೆ ಮನವಿ ಮಾಡಿ, ತಾವೂ ಒಂದು ಡಬ್ಬಿ ಇಟ್ಟು ಉಳಿತಾಯ ಮಾಡಿ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ ಎಡ್ವರ್ಡ್ ಡಿಸೋಜಾ ಅವರು ಕಾಣಿಕೆ ಡಬ್ಬಿ ಮೇಷ್ಟ್ರು ಎಂದೇ ಜನಪ್ರೀತಿ ಗಳಿಸಿದ್ದಾರೆ.
ಶಾಲೆಯ ಅಭಿವೃದ್ದಿಗಾಗಿ ಊರ ಪರವೂರ ದಾನಿಗಳು ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ, ಇಲಾಖೆ ಸಹೋದ್ಯೋಗಿಗಳು, ಜನಪ್ರತಿನಿಧಿಗಳು ಹಾಗೂ ಮಿತ್ರರ ಸಹಕಾರದಿಂದ 1 ಕೋಟಿ ರೂ. ಗಳಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿ, ಶಾಲೆಯನ್ನು ಅಭಿವೃದ್ದಿ ಪಡಿಸಿದ್ದಾರೆ.
ಶಾಲಾ ಕಟ್ಟಡ, ವಿದ್ಯುದೀಕರಣ, ಹೊರಾಂಗಣ– ಒಳಾಂಗಣ ವೇದಿಕೆ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾರ್ಯಗಳಲ್ಲಿ ಮುತುವರ್ಜಿ ವಹಿಸಿ, ಕಟ್ಟದಬೈಲು ಶಾಲೆ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ‘ಸ್ವರ್ಣನಿಧಿ’ ಹೆಸರಿನಲ್ಲಿ ಪ್ರತಿ ದಿನ ₹ 1 ಸೇರಿಸಿ ಮಕ್ಕಳಿಂದ ಪ್ರತಿ ದಿನ ಒಂದು ರೂಪಾಯಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಶಿಷ್ಯವೇತನ, ಪ್ರೋತ್ಸಾಹಧನ ನೀಡಿದ್ದಾರೆ. ವಜ್ರನಿಧಿ ಹೆಸರಿನಲ್ಲಿ ದಾನಿಗಳು, ಶಿಕ್ಷಕರು ಹಾಗೂ ಪೋಷಕರ ನೆರವು ಪಡೆದು ಗೌರವ ಶಿಕ್ಷಕಿಯರಿಗೆ ಸಂಭಾವನೆ ನೀಡುವ ಕೆಲಸ ಮಾಡಿದ್ದಾರೆ.
You must be logged in to post a comment Login