LATEST NEWS
ಕರಾವಳಿಯಲ್ಲಿ ಗುಪ್ತವಾಗಿ ಆರಂಭಗೊಂಡಿದೆ ಕ್ರಿಶ್ಚಿಯನ್ ಅಧಾರ್ ಕಾರ್ಡ್ ಪ್ರಕ್ರಿಯೆ !
ಕರಾವಳಿಯಲ್ಲಿ ಗುಪ್ತವಾಗಿ ಆರಂಭಗೊಂಡಿದೆ ಕ್ರಿಶ್ಚಿಯನ್ ಅಧಾರ್ ಕಾರ್ಡ್ ಪ್ರಕ್ರಿಯೆ !
ಮಂಗಳೂರು, ಮೇ 20: ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡಿನಲ್ಲಿ ಪ್ರತಿ ಕ್ರೈಸ್ತ ಕುಟುಂಬಕ್ಕೆ ಇತ್ತೀಚಿನ ಕೆಲವು ದಿನಗಳಲ್ಲಿ ಸರ್ವೇಯರ್ ಗಳ ಭೇಟಿ ನಡೆಯುತ್ತಿದೆ. ಅಂದ ಹಾಗೆ ಇದು ಸರಕಾರಿ ಸರ್ವೇಯರ್ ಗಳಲ್ಲ. ಇವರು ಆಯಾಯ ಪ್ರದೇಶಕ್ಕೆ ಸಂಬಂಧಪಟ್ಟ ಚರ್ಚ್ ಗಳ ಗುರಿಕಾರರಾಗಿದ್ದು, ಎಲ್ಲಾ ಮನೆಗಳಿಗೆ ಈ ಸರ್ವೇಯರ್ ಗಳ ಭೇಟಿ ಆರಂಭಗೊಂಡಿದೆ.
ಚರ್ಚ್ ನ ಆದೇಶದ ಪ್ರಕಾರ ಎಲ್ಲಾ ಕ್ರಿಶ್ಚಿಯನ್ ಕುಟುಂಬಗಳು ತಮ್ಮ ಮನೆ ಮಂದಿಯ ಎಲ್ಲಾ ವೈಯುಕ್ತಿಕ ಮಾಹಿತಿಗಳನ್ನು ಈ ಗುರಿಕಾರರು ನೀಡಿದ ಫಾರಂ ನಲ್ಲಿ ನಮೂದಿಸಿ ಚರ್ಚ್ ಗೆ ಮುಟ್ಟಿಸಬೇಕಿದೆ. ಒಂದು ವೇಳೆ ಈ ಮಾಹಿತಿಯನ್ನು ನೀಡಲು ಹಿಂದೆ ಮುಂದೆ ನೋ಼ಡಿದ ಕುಟುಂಬಕ್ಕೆ ಚರ್ಚ್ ನಿಂದ ಕರೆ ಬರುತ್ತಿದ್ದು, ಚರ್ಚ್ ನ ಎಲ್ಲಾ ಕಾರ್ಯಕ್ರಮಗಳಿಗೂ ಬಹಿಷ್ಕಾರ ಹಾಕುವ ಬೆದರಿಕೆಯೂ ಬರಲಾರಂಭಿಸಿದೆ ಎನ್ನಲಾಗಿದೆ.
ಚರ್ಚ್ ಗಳು ಬಯಸುವ ಮಾಹಿತಿಯಲ್ಲಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಆದಾಯ, ಆತನ ಜಮೀನು, ಬ್ಯಾಂಕ್ ಬ್ಯಾಲೆನ್ಸ್ , ವೇತನ, ರಾಜಕೀಯ ನಂಟು, ರೇಶನ್ ಕಾರ್ಡ್ ಸೇರಿದಂತೆ ಯಾವೆಲ್ಲಾ ತೀರಾ ವೈಯುಕ್ತಿಕ ವಿಚಾರಗಳಿವೆಯೋ ಇವೆಲ್ಲವನ್ನೂ ಫಾರಂ ನಲ್ಲಿ ಭರ್ತಿ ಮಾಡಿ ನೀಡುವ ಫರ್ಮಾನನ್ನೂ ಹೊರಡಿಸಲಾಗಿದೆ.
ಯಾವ ರೀತಿ ಸರಕಾರ ಆಧಾರ್ ಕಾರ್ಡ್ ಮಾಡುವ ಸಂದರ್ಭದಲ್ಲಿ ವ್ಯಕ್ತಿಯ ಮಾಹಿತಿಗಳನ್ನು ಪಡೆಯುತ್ತದೋ, ಅದಕ್ಕಿಂತ ನಾಲ್ಕು ಪಟ್ಟು ಜಾಸ್ತಿ ಎನ್ನುವಂತಹ ಮಾಹಿತಿಗಳನ್ನು ಈ ಫಾರಂ ಮೂಲಕ ಎಲ್ಲಾ ಕುಟುಂಬಗಳು ನೀಡುವಂತಹ ಆದೇಶ ಮಂಗಳೂರು ಧರ್ಮಪ್ರಾಂತದ ಬಿಷಪ್ ರಿಂದಲೇ ಆಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಕ್ರಿಶ್ಚಿಯನ್ ಕುಟುಂಬಗಳ ಜನಸಂಖ್ಯೆಯನ್ನು ದಾಖಲಿಸುವ ನಿಟ್ಟಿನಲ್ಲಿ ಈ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದಾದರೆ, ತೀರಾ ವೈಯುಕ್ತಿಕ ದಾಖಲೆಗಳನ್ನು ಒತ್ತಾಯಪೂರ್ವಕವಾಗಿ ಪಡೆಯುವ ಅವಶ್ಯಕತೆ ಏನು ಎನ್ನುವ ಸಂಶಯವು ಇದೀಗ ಮೂಡಲಾರಂಭಿಸಿದೆ.
ಧರ್ಮಾಧ್ಯಕ್ಷರ ಫರ್ಮಾನಿನ ಹಿನ್ನಲೆಯಲ್ಲಿ ಎರಡು ಮಾತನಾಡದೆ ಕರಾವಳಿ ಜಿಲ್ಲೆಗಳ ಶೇಕಡಾ 99 ಕ್ರಿಶ್ಚಿಯನ್ ಕುಟುಂಬಗಳು ಈಗಾಗಲೇ ಈ ಮಾಹಿತಿಗಳನ್ನು ಚರ್ಚ್ ನ ಗುರಿಕಾರರ ಮುಖಾಂತರ ಚರ್ಚ್ ಗೆ ಸಲ್ಲಿಸಿದ್ದು, ಈ ಎಲ್ಲಾ ಮಾಹಿತಿಗಳು ಸದ್ಯದಲ್ಲೇ ಬಿಷಪ್ ಟೇಬಲ್ ಗೆ ಬಂದು ಬೀಳಲಿದೆ. ಆದರೆ ಈ ಮಾಹಿತಿಗಳು ಬಿಷಪ್ ಟೇಬಲ್ ತಲುಪುವ ಮೊದಲು ಸಿಗಬಾರದವರ ಕೈಗೆ ಸಿಕ್ಕಿ ಅದರ ದುರ್ಬಳಕೆಯಾದರೆ ಅದಕ್ಕೆ ಯಾರು ಜವಾಬ್ದಾರಿ ಎನ್ನುವುದಕ್ಕೆ ಈವರೆಗೂ ಬಿಷಪ್ ರಿಂದಾಗಲೀ, ಚರ್ಚ್ ನಿಂದಾಗಲೀ ಭರವಸೆ ಸಿಕ್ಕಿಲ್ಲ.
ಧರ್ಮದ ಕಟ್ಟುಪಾಡಿನ ಹೆಸರಿನಲ್ಲಿ ಒರ್ವ ವ್ಯಕ್ತಿಯ ವೈಯುಕ್ತಿಕ ದಾಖಲೆಗಳನ್ನು ಪಡೆಯುವುದು ಎಷ್ಟು ಸರಿ ಎನ್ನುವುದನ್ನು ಸರಕಾರವೇ ನಿರ್ಧರಿಸಬೇಕಿದೆ. ಸ್ವತಹ ದೇಶದ ಉಚ್ಛ ನ್ಯಾಯಾಲಯವೇ ವ್ಯಕ್ತಿಯ ವೈಯುಕ್ತಿಕ ಮಾಹಿತಿಗಳನ್ನು ಒತ್ತಾಯಪೂರ್ವಕವಾಗಿ ಪಡೆಯುವಂತಿಲ್ಲ ಎನ್ನುವ ಆದೇಶ ನೀಡಿದ್ದರೂ, ಚರ್ಚ್ ಗಳು ಈ ಆದೇಶಕ್ಕೆ ವ್ಯತಿರಿಕ್ತವಾಗಿ ವ್ಯವಹರಿಸುವುದರ ಉದ್ಧೇಶ ಏನು ಎನ್ನುವುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕಿದೆ.
ಚರ್ಚ್ ಗಳು ಈ ಎಲ್ಲಾ ವ್ಯವಹಾರಗಳನ್ನು ಅತ್ಯಂತ ಗುಪ್ತವಾಗಿಯೇ ನಿರ್ವಹಿಸುತ್ತಿದ್ದು, ಕ್ರೈಸ್ತ ಧರ್ಮೀಯರಿಗಾಗಿಯೇ ಹೊಸ ಅಧಾರ್ ಕಾರ್ಡ್ ಆರಂಭಿಸುತ್ತಿದೆಯೇ ಎನ್ನುವ ಸಂಶಯವೂ ಹೆಚ್ಚಾಗಲಾರಂಭಿಸಿದೆ. ಈಗಾಗಲೇ ಕೆಲವು ಮಂದಿ ಈ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಯಾವುದೇ ಕಾರಣಕ್ಕೂ ವೈಯುಕ್ತಿಕ ಮಾಹಿತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಅತ್ಯಂತ ಸುರಕ್ಷಿತವಾಗಿರುವ ಕೇಂದ್ರ ಸರಕಾರದ ಆಧಾರ್ ಕಾರ್ಡ್ ಗೆ ಮಾಹಿತಿ ಸೋರಿಕೆ ಬಿಸಿ ತಟ್ಟಿದ್ದು, ಇತ್ತೀಚೆಗೆ ಆಧಾರ್ ಕಾರ್ಡ್ ನ ಮಾಹಿತಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಆದರೆ ಚರ್ಚ್ ಮುಖಾಂತರ ಪಡೆದುಕೊಂಡ ಮಾಹಿತಿಗಳು ಅದರಲ್ಲಿ ಆಧಾರ್ ಕಾರ್ಡ್ , ರೇಶನ್ ಕಾರ್ಡ್ ಹಾಗೂ ವೋಟರ್ ಐಡಿ ಮಾಹಿತಿಗಳು ಇದ್ದು, ಈ ಮಾಹಿತಿಗಳು ಸೋರಿಕೆಯಾದರೆ ಅದಕ್ಕೆ ಹೊಿಣೆ ಯಾರು ಎಂದು ಹೆಸರು ಹೇಳಲು ಇಚ್ಚಿಸದ ಸಮುದಾಯದ ಒಬ್ಬರು ಆರೋಪಿಸಿದ್ದಾರೆ.
You must be logged in to post a comment Login