Connect with us

    LATEST NEWS

    ಲಷ್ಕರ್, ತಾಲಿಬಾನ್ ಪರ ಗೋಡೆ ಬರಹ, ಬಿಜೆಪಿ‌ಯ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ : ಡಿವೈಎಫ್ಐ

    ಮಂಗಳೂರು ನವೆಂಬರ್ 27: ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯ ಸಮೀಪದ ಗೋಡೆಯೊಂದರಲ್ಲಿ ಲಷ್ಕರ್ ತೋಯ್ಬಾ, ತಾಲಿಬಾನ್ ಪರ ಘೋಷಣೆಗಳು ಪ್ರತ್ಯಕ್ಷಗೊಂಡಿರುವುದು ಆತಂಕಕಾರಿ ವಿದ್ಯಮಾನ, ಇದು ನಗರದ ನಾಗರಿಕರಲ್ಲಿ ಆತಂಕ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ. ಸಮಾಜದ ನೆಮ್ಮದಿಗೆ ಕಂಟಕವಾಗಿರುವ ಈ ಕೃತ್ಯ ಬಿಜೆಪಿ ಆಡಳಿತದ ವೈಫಲ್ಯವನ್ನು ಎತ್ತಿತೋರಿಸುತ್ತದೆ‌. ಇಂತಹ ಹೀನ ಕೃತ್ಯ ಎಸಗಿರುವ ಸಮಾಜಘಾತುಕ ಶಕ್ತಿಗಳನ್ನು ತಕ್ಷಣವೇ ಬಂಧಿಸಿ ಕೃತ್ಯದ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆಯಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

    ನಗರದ ಹೃದಯ ಭಾಗದಲ್ಲಿ, ಪೊಲೀಸ್ ಠಾಣೆಯ ಕಣ್ಣಳತೆಯ ದೂರದಲ್ಲಿ ಇಂತಹ ಗೋಡೆ ಬರಹ ಪ್ರತ್ಯಕ್ಷಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ, ಪೊಲೀಸ್ ವೈಫಲ್ಯವನ್ನೂ ಎತ್ತಿ ತೋರಿಸುತ್ತದೆ. ಕೋಮು ಸೂಕ್ಷ್ಮ ಮಂಗಳೂರಿನಲ್ಲಿ ಇದು ಶಾಂತಿ ಕದಡುವ ಉದ್ದೇಶವನ್ನು ಹೊಂದಿದೆ. ಉದ್ಯೋಗ, ಆರೋಗ್ಯ, ಶಿಕ್ಷಣ ಹೀಗೆ ತಮ್ಮ ದೈನಂದಿನ ಬದುಕಿನ ಹಲವು ಸಮಸ್ಯೆಗಳಿಂದ ಜನತೆ ಕಂಗೆಟ್ಟಿರುವ ಪ್ರಸಕ್ತ ಸಂದರ್ಭದಲ್ಲಿ ಈ ರೀತಿಯ ಪ್ರಚೋದನಾಕಾರಿ ಕೃತ್ಯ ಜನರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೂ ನಡೆದಿರಬಹುದು. ಒಟ್ಟಾರೆಯಾಗಿ ಈ ಬರಹ ಭಿನ್ನ ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಡಳಿತ ಹಳಿ ತಪ್ಪಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕ್ರಿಮಿನಲ್ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ. ಲಷ್ಕರ್ ಪರ ಗೋಡೆಬರಹವೂ ಬಿಜೆಪಿ ಆಡಳಿತ ವೈಫಲ್ಯದ ನೇರ ಪರಿಣಾಮವಾಗಿದೆ.

    ಪೊಲೀಸ್ ಇಲಾಖೆ ತಕ್ಷಣವೆ ತಾಲಿಬಾನ್, ಲಷ್ಕರ್ ಪರ ಗೋಡೆ ಬರಹದ ಆರೋಪಿಗಳನ್ನು ಬಂಧಿಸಬೇಕು. ಕೃತ್ಯದ ಹಿಂದಿನ ಹುನ್ನಾರಗಳನ್ನು ಬಯಲಿಗೆ ತರಬೇಕು. ಇಲ್ಲದಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply