ಚಿಕ್ಕಬಳ್ಳಾಪುರ,ಏಪ್ರಿಲ್ 24: ಐದು ವರ್ಷಗಳ ಹಿಂದೆ ಸ್ವಂತ ತಾಯಿಯಿಂದಲೇ ಮಾರಾಟವಾಗುವ ಹಂತ ತಲುಪಿದ್ದ ಪುಟ್ಟ ಬಾಲಕಿಯೊಬ್ಬಳ ಬದುಕಿನಲ್ಲಿ ಇಂದು ಹೊಸ ಆಶಾಕಿರಣ ಮೂಡಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಈ ಬಾಲಕಿಯನ್ನು ಭಾರತೀಯ ಮೂಲದ ದುಬೈ ದಂಪತಿಗಳು ದತ್ತು ಪಡೆದಿದ್ದು, ಗುರುವಾರದಂದು (ಏಪ್ರಿಲ್ 23) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಗು ತನ್ನ ಹೊಸ ಪೋಷಕರೊಂದಿಗೆ ವಿದೇಶಕ್ಕೆ ಪಯಣ ಬೆಳೆಸಿದೆ.

ಐದು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ನಗರದ ರಸ್ತೆಗಳಲ್ಲಿ ಮಹಿಳೆಯೊಬ್ಬಳು ಕೈಗೂಸನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದಳು. ತಂದೆಯ ಆಸರೆಯಿಲ್ಲದ ಮಗುವನ್ನು ಸಾಕಿ ಸಲಹುವ ಶಕ್ತಿ ಇಲ್ಲದ ಆ ತಾಯಿ, ಬಡತನ ತಾಳಲಾರದೆ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದಳು. ಈ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಗುವನ್ನು ರಕ್ಷಿಸಿ ತಮ್ಮ ವಶಕ್ಕೆ ಪಡೆದಿದ್ದರು. ಅಂದಿನಿಂದ ಈ ಬಾಲಕಿ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿಯೇ ಬೆಳೆದಿದ್ದಳು.
ಇಲಾಖೆಯ ವಶಕ್ಕೆ ಬಂದ ನಂತರ ಮಗುವನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆಗೆ ಹೃದಯ ಸಂಬಂಧಿ ಕಾಯಿಲೆ ಇರುವುದು ದೃಢಪಟ್ಟಿತ್ತು. ಸತತ ಐದು ವರ್ಷಗಳ ಕಾಲ ಅಧಿಕಾರಿಗಳು ಮಗುವನ್ನು ಪೋಷಿಸಿದರು. ಆದರೆ ಮಗುವಿನ ಹೃದಯದ ಸಮಸ್ಯೆಯ ಕಾರಣದಿಂದಾಗಿ ಭಾರತದ ಯಾವುದೇ ದಂಪತಿಗಳು ಆಕೆಯನ್ನು ದತ್ತು ಪಡೆಯಲು ಮುಂದೆ ಬಂದಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಗಳು ಬಾಲಕಿಯ ಜವಾಬ್ದಾರಿ ಹೊರಲು ಸಮ್ಮತಿಸಿದರು.

ಬಾಲಕಿಗೆ ಸದ್ಯಕ್ಕೆ 7 ವರ್ಷ ವಯಸ್ಸಾಗಿದ್ದು, ಮುಂದಿನ ಎರಡು ವರ್ಷಗಳ ನಂತರ ಒಂದು ಸಣ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಈ ಬಗ್ಗೆ ಸಂಪೂರ್ಣ ಅರಿವಿದ್ದರೂ ದುಬೈ ದಂಪತಿಗಳು ಹಿಂಜರಿಯದೆ ಆಕೆಯನ್ನು ದತ್ತು ಪಡೆದಿದ್ದಾರೆ. “ಮಗುವಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ಕೊಡಿಸಿ, ಆಕೆಯನ್ನು ಸಮಾಜದಲ್ಲಿ ದೊಡ್ಡ ಸಾಧಕಿಯನ್ನಾಗಿ ಮಾಡುತ್ತೇವೆ” ಎಂದು ದಂಪತಿಗಳು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಏಪ್ರಿಲ್ 23 ರಂದು ಬೆಂಗಳೂರಿನ ವಿಮಾನ ನಿಲ್ದಾಣದ ಮೂಲಕ ಮಗು ದುಬೈಗೆ ಪ್ರಯಾಣ ಬೆಳೆಸಿದೆ. ಈ ಕುರಿತು ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನವತಾಜ್ ಅವರು, “ಕಾಯಿಲೆ ಇದ್ದ ಕಾರಣ ಯಾರೂ ದತ್ತು ಪಡೆಯಲು ಮುಂದೆ ಬಾರದಿದ್ದಾಗ ಈ ದಂಪತಿ ತೋರಿದ ಮಾನವೀಯತೆ ಶ್ಲಾಘನೀಯ. ಕಾನೂನುಬದ್ಧವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ ಮಗುವನ್ನು ಹಸ್ತಾಂತರಿಸಲಾಗಿದೆ. ಮಗುವಿನ ಭವಿಷ್ಯ ಉಜ್ವಲವಾಗಲಿ” ಎಂದು ಹಾರೈಸಿದರು.