ಬಂಟ್ವಾಳ ಮಾರ್ಚ್ 21: ಪಾನಮತ್ತ ಯುವಕನೊಬ್ಬ ಮೆಲ್ಕಾರ್ ಗುಡ್ಡೆಯಂಗಡಿ ಎಂಬಲ್ಲಿರುವ ಪೆಟ್ರೋಲ್ ಪಂಪ್ ಗೆ ನುಗ್ಗಿ ದಾಂಧಲೆಗೈದು ಅಲ್ಲಿದ್ದ ಸೊತ್ತುಗಳನ್ನು ಧ್ವಂಸಗೈದ ಘಟನೆ ನಡೆದಿದ್ದು, ಪೊಲೀಸ್ ಒಬ್ಬರ ಎದುರಲ್ಲೇ ಆವಾಜ್ ಹಾಕುತ್ತಾ ಸ್ಥಳದಲ್ಲಿ ಹೈಡ್ರಾಮಾ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದೆ.

ಪಂಪ್ ಏಜೆನ್ಸಿಯ ಮ್ಯಾನೇಜರ್ ಕುನಲ್ ಭುಹ್ನಿಯಾ (27) ಅವರು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್ 20ರಂದು ಸಂಜೆ ಆಟೋ ರಿಕ್ಷಾದಲ್ಲಿ ಬಂದ ಚಾಲಕ ಸಜಪಮೂಡ ಕಾರಾಜೆಯ ಅಫ್ರೀದ್ (28) ಏಜೆನ್ಸಿಯ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅಶ್ವಿನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ.ಆನಂತರ, ಗ್ಯಾಸ್ ಪೈಪನ್ನು ಎಳೆದು ಕಾಲಿನಲ್ಲಿ ತುಳಿದು ಅಲ್ಲಿದ್ದ ಇತರೇ ಉಪಕರಣಗಳಿಗೂ ಹಾನಿ ಮಾಡಿದ್ದಲ್ಲದೆ, ಸಿಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ.

ಹಲ್ಲೆಯ ನಂತರ ಹೊರಬಂದ ಚಾಲಕನು ಏಜೆನ್ಸಿಯ ಬೆಲೆಬಾಳುವ ಸೊತ್ತುಗಳಿಗೆ ಹಾನಿ ಮಾಡಿದ್ದಾನೆ. ಇದರಿಂದ ಸುಮಾರು ₹48,000 ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸರು ಬಿಎನ್ಎಸ್ (BNS 2023) ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಬೀಟ್ ಪೊಲೀಸ್ ಒಬ್ಬರು ರಂಪಾಟ ಮಾಡುತ್ತಿದ್ದ ಯುವಕನನ್ನು ಎತ್ತಿಕೊಂಡು ಹೋಗಲು ಠಾಣೆಯಿಂದ ಪೊಲೀಸ್ ಜೀಪ್ ಬರಲು ಹೇಳಿದ್ದಾರೆ. ಆದರೆ ಅಷ್ಟರಲ್ಲೇ ಪೊಲೀಸರಿಗೂ ಆವಾಜ್ ಹಾಕುತ್ತಾ ಅವರಿಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಳಿಕ ಪೊಲೀಸ್ ಜೀಪ್ ಬರುತ್ತಲೇ ಅಲ್ಲಿಂದ ಆತನನ್ನು ಎಳಕೊಂಡು ಜೀಪಿಗೆ ತಳ್ಳಿ ಠಾಣೆಗೆ ಒಯ್ದಿದ್ದಾರೆ.