ಬೆಂಗಳೂರು ಸೆಪ್ಟೆಂಬರ್ 11: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಖ್ಯಾತ ಚಿತ್ರ ನಿರ್ದೇಶಕ ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಸ್.ನಾರಾಯಣ್ ಅವರ 2ನೇ ಮಗನ ಪತ್ನಿ ಪವಿತ್ರಾ ದೂರು ದಾಖಲಿಸಿದ್ದಾರೆ. ದೂರಿನನ್ವಯ ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ನಾರಾಯಣ್ ನಾವೇನೋ ಹಿಂಸೆ ಕೊಟ್ಟಿದ್ದೇವೆ ಅಂತ ದೂರು ಕೊಟ್ಟಿದ್ದಾರೆ. ಅದು ಕೋರ್ಟಿಗೆ ಹೋಗಿದೆ. ನಾವು ಅದರ ಬಗ್ಗೆ ಹೇಳಿದ್ರೆ ಅವರಿಗೇ ಅವಮಾನ ಮಾಡಿದಂತೆ ಆಗುತ್ತೆ. ಪಾಪ ಹೆಣ್ಮಗು ಅಲ್ವಾ? ಅವರಿಗೆ ತೇಜೋವಧೆ ಮಾಡಬಾರದು ಅಂತ ಹೇಳಿದ್ದಾರೆ. ಇನ್ನೂ ವರದಕ್ಷಿಣ ಕಿರುಕುಳ ಅಂತ ಆರೋಪ ಮಾಡಿದ್ದರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ರೆಗ್ಯೂಲರ್ ಆಗಿ ನಮ್ಮ ದೇಶದಲ್ಲಿ ಎಲ್ಲಾ ಹೆಣ್ಮಕ್ಕಳು ಮಾಡೋದು ಅದೊಂದೇ ತಾನೆ. ಬೇರೆ ಇನ್ನೇನಾದ್ರೂ ಸಿಗುತ್ತಾ? ಅವರು ಮನೆ ಬಿಟ್ಟು ಹೋಗಿ ಒಂದು ವರ್ಷ ಆಯ್ತು. ಈಗ ದೂರು ಕೊಟ್ಟಿದ್ದಾರೆ. ಅವರಿಗೆ ಸುಃಖ, ಸಂತೋಷ ಎಲ್ಲಿ ಸಿಗುತ್ತೋ ಅಲ್ಲಿಗೆ ಹೋಗಿದ್ದಾರೆ. ನನ್ನ ವ್ಯಕ್ತಿತ್ವ ಎಲ್ಲರಿಗೂ ಗೊತ್ತು, ನಾವು ಸದಾ ಹೆಣ್ಮಕ್ಕಳನ್ನ ಗೌರವರಿಂದ ಕಾಣುವಂತಹವರು ಅಂತ ತಿಳಿಸಿದ್ದಾರೆ.



