ಬೆಂಗಳೂರು, ಮಾರ್ಚ್ 26: ಅಕ್ರಮ ಸಂಬಂಧದ ವಿಚಾರವಾಗಿ ನಡೆದ ವಾಗ್ವಾದವೊಂದು ವಿಕೋಪಕ್ಕೆ ಹೋಗಿ, ಮಹಿಳೆ ಹಾಗೂ ಆಕೆಯ ಸಹೋದರನನ್ನು ಅಪ್ರಾಪ್ತ ಬಾಲಕನೊಬ್ಬ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರದಲ್ಲಿ ನಡೆದಿದೆ.

ನೆಲಮಂಗಲ ಮೂಲದ ಯಮುನಾ (36) ಮತ್ತು ಆಕೆಯ ಸಹೋದರ ಸುದೀಪ್ (34) ಹತ್ಯೆಯಾದ ದುರ್ದೈವಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ 17 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಯಮುನಾ ಅವರ ಪತಿ ಮತ್ತು ಛಾಯಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪವಿತ್ತು. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ಸಂಬಂಧದ ಕುರಿತು ನೇರವಾಗಿ ಛಾಯಾ ಅವರನ್ನೇ ಪ್ರಶ್ನಿಸಲು ನಿರ್ಧರಿಸಿದ ಯಮುನಾ, ಗುರುವಾರ ಮಧ್ಯಾಹ್ನ ತನ್ನ ಸಹೋದರ ಸುದೀಪ್ ಜೊತೆಗೂಡಿ ಪೀಣ್ಯದ ಶಿವಪುರದಲ್ಲಿರುವ ಛಾಯಾ ಮನೆಗೆ ತೆರಳಿದ್ದಾರೆ.
ಮನೆಯ ಬಳಿ ಅಕ್ರಮ ಸಂಬಂಧದ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಉಭಯ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ತಾರಕಕ್ಕೇರಿದ ಸಂದರ್ಭದಲ್ಲಿ, ಛಾಯಾಳ ಮಗ ಮನೆಯಲ್ಲಿದ್ದ ಮಚ್ಚಿನಿಂದ ಏಕಾಏಕಿ ಯಮುನಾ ಮತ್ತು ಸುದೀಪ್ ಅವರ ಮೇಲೆ ದಾಳಿ ನಡೆಸಿದ್ದಾನೆ. ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾದ ಪರಿಣಾಮ, ದಾರುಣವಾಗಿ ರಕ್ತ ಸೋರಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಉತ್ತರ ವಿಭಾಗದ ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಹತ್ಯೆಗೆ ಬಳಸಿದ ಮಚ್ಚನ್ನು ವಶಪಡಿಸಿಕೊಳ್ಳಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.