LATEST NEWS
ಉಡುಪಿ ಮಹಿಳೆ ಸಾವು ವೈದ್ಯರ ನಿರ್ಲಕ್ಷ್ಯ ಆರೋಪ ; ದೂರು ದಾಖಲು
ಉಡುಪಿ ಅಗಸ್ಟ್ 22: ಖಾಸಗಿ ಹಾಗೂ ಸರಕಾರಿ ವೈದ್ಯರ ನಿರ್ಲಕ್ಷ್ಯ ದಿಂದಾಗಿ ಮಹಿಳೆ ಸಾವನಪ್ಪಿದ್ದಾರೆ ಮೃತರ ಸಂಬಂಧಿಕರು ಆರೋಪಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಯುವತಿಯನ್ನು ರಕ್ಷಾ (26) ಎಂದು ಗುರುತಿಸಲಾಗಿದೆ.
ತಲೆ ನೋವಿನಿಂದ ಬಳಲುತ್ತಿದ್ದ ರಕ್ಷಾ ಅವರನ್ನು ಆಗಸ್ಟ್ 21 ರ ಬೆಳಿಗ್ಗೆ ಚಿಕಿತ್ಸೆಗಾಗಿ ಮಿಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈ ವೇಳೆ ವೈದ್ಯರು ಇಂಜೆಕ್ಷನ್ ನೀಡಿ ಮನೆಗೆ ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದು, ಆದರೆ, ಬೆಳಿಗ್ಗೆ 9 ಗಂಟೆ ಸುಮಾರಿಗೆ ಆಕೆಯನ್ನು ಮನೆಯವರು ಕರೆದಾಗ ಆಕೆ ಯಾವುದೇ ಸ್ಪಂದನೆ ನೀಡಿಲ್ಲ. ತಕ್ಷಣ ಆಕೆಯನ್ನು ಮಿಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅಷ್ಟರಲ್ಲಿ ಆಸ್ಪತ್ರೆಯ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ಯುವತಿ ಒಮ್ಮೆಲ್ಲೇ ಸಾವನ್ನಪ್ಪಲು ಮಿಷನ್ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ರಕ್ಷಾ ಅವರ ಕುಟುಂಬ ಸದಸ್ಯರು ದೂರಿದ್ದಾರೆ.
ಸ್ಥಳೀಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರೂ ಆಗಿರುವ ರಕ್ಷಾ ಅವರ ಪತಿ ಶಿವಪ್ರಸಾದ್, ಕುಟುಂಬಸ್ಥರು ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಈ ಪ್ರಕರಣದ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಈ ನಡುವೆ ರಕ್ಷಾ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು ಎಂದು ಹೇಳಲಾಗಿದೆ. ಆದರೆ ರ್ಯಾಪಿಡ್ ಆಂಟಿಜನ್ ಟೆಸ್ಟ್ನಲ್ಲಿ ನೆಗೆಟಿವ್ ಆಗಿತ್ತು ಎಂದು ಕೂಡಾ ಹೇಳಲಾಗಿದೆ. ಹಾಗೆಯೇ ಮೃತ ದೇಹದ ಅಂತಿಮ ಸಂಸ್ಕಾರದ ವಿಚಾರದಲ್ಲಿ ಗೊಂದಲಗಳು ಉಂಟಾಗಿದೆ ಎಂದು ವರದಿಯಾಗಿದೆ.
ಹಾಗೆಯೇ ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಚುಚ್ಚುಮದ್ದು ನೀಡಿದ ವೈದ್ಯರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಕ್ಷಾ ಅವರು ಇಂಧಿರಾನಗರದ ನಿವಾಸಿಯಾಗಿದ್ದು ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
You must be logged in to post a comment Login