KARNATAKA
ಇದು ನನ್ನ ಡೆತ್ ನೋಟ್ – ಕೊರೊನಾದಿಂದ ನಾನು ಸತ್ತರೇ ರಾಜ್ಯ ಸರಕಾರವೇ ಹೊಣೆ – ನಿರ್ದೇಶಕ ಗುರುಪ್ರಸಾದ್
ಬೆಂಗಳೂರು ಎಪ್ರಿಲ್ 19: ರಾಜ್ಯ ಸರಕಾರ ಕೊರೊನಾ ನಿರ್ವಹಣೆಯಲ್ಲಿ ತೋರುತ್ತಿರುವ ಅಸಡ್ಡೆ ವಿರುದ್ದ ನಟ ಹಾಗೂ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ಲೈವ್ ಮೂಲಕ ರಾಜಕಾರಣಿಗಳ ಬಗ್ಗೆ ಹಾಗೂ ವ್ಯವಸ್ಥೆಯ ವಿರುದ್ಧ ವಾಗ್ಧಾಳಿ ನಡೆಸಿದ ಅವರು ತಮ್ಮ ಲೈವ್ ವಿಡಿಯೋವನ್ನೇ ಡೆತ್ನೋಟ್ ಎಂದು ಪರಿಗಣಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೊಂಕಿಗೆ ಒಳಗಾಗಿರುವ ನಿರ್ದೇಶಕ ಗುರುಪ್ರಸಾದ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕೊರೊನಾಕ್ಕಾಗಿ ರಾಜ್ಯ ಸರ್ಕಾರದ ಸಿದ್ದತೆ ಬಗ್ಗೆ ಮಾತನಾಡಿರುವ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಮತ್ತು ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.
ಒಬ್ಬ ಸತ್ತರೂ ನಾನು ಅದಕ್ಕೆ ಹೊಣೆಗಾರ ಅನ್ನುವವರು ಮುಖ್ಯಮಂತ್ರಿ, ಆದರೆ ಇಲ್ಲಿ ಜನಗಳು ಸಾಯುತ್ತಿದ್ದಾರಲ್ಲ ನೋಡ್ರಿ, ಪ್ರಾಮಾಣಿಕತೆ ಇದ್ದಲ್ಲಿ ಆಡಳಿತ ಇರುತ್ತದೆ. ಪ್ರಾಮಾಣಿಕತೆ ಇಲ್ಲದ ಕಡೆ ರಾಜಕೀಯ ಇರುತ್ತದೆ. ರಾಜಕಾರಣಿಗಳು ಯಾರೂ ಕೂಡ ಸಾಚಾ ಅಲ್ಲ. ರಾಜಕೀಯ ಮಾಡುವುದನ್ನು ಬಿಟ್ಟು ಜನರ ಸೇವೆ ಮಾಡಿ ಎಂದು ಹೇಳಿದ್ದಾರೆ.ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕೊರೋನಾದಿಂದ ಮೃತಪಟ್ಟ ಪ್ರತಿಯೊಬ್ಬರ ಸಾವಿಗೆ ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ವಿಜಯೇಂದ್ರ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕಸ್ಮಾತ್ ಕೊರೊನಾದಿಂದ ನಾನು ಮೃತಪಟ್ಟರೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ನನ್ನ ಡೆತ್ ನೋಟ್. ಜನರ ಪ್ರಾಣ ಉಳಿಸಿ ಸ್ವಾಮಿ ಎಂದು ಹೇಳಿದ್ದಾರೆ.
You must be logged in to post a comment Login