ಬೆಳ್ತಂಗಡಿ ನವೆಂಬರ್ 19: ಧರ್ಮಸ್ಥಳದ ನೆಲವನ್ನು ಅಗೆದರೆ ಅಲ್ಲಿ ಬುರುಡೆ ಸಿಗುವುದಿಲ್ಲ, ಬದಲಿಗೆ ಹೆಗ್ಗಡೆ ಮತ್ತು ಧರ್ಮಸ್ಥಳ ಕ್ಷೇತ್ರದ ಕೊಡುಗೆ ಸಿಗುತ್ತದೆ. ಯಾರು ಏನೇನು ಆರೋಪವನ್ನು ಮಾಡಿದ್ದಾರೆ ಎನ್ನುವುದು, ಎಲ್ಲವೂ ರಾಜ್ಯದ ಜನತೆಗೆ ಮತ್ತು ಭಕ್ತರಿಗೆ ತಿಳಿದಿದೆ ಎಂದು ತನ್ವೀರ್ ಅಹ್ಮದ್ ಉಲ್ಲಾ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ವಾರ್ಷಿಕ ಕಾರ್ತಿಕ ಲಕ್ಷದೀಪೋತ್ಸವದ ಸರ್ವಧರ್ಮ ಸಮ್ಮೇಳನದಲ್ಲಿ, ಇಸ್ಲಾಂ ಧರ್ಮದಲ್ಲಿ ಸಮನ್ವಯತೆ ವಿಚಾರದ ಬಗ್ಗೆ ಉಪನ್ಯಾಸ ನೀಡಲು ತನ್ವೀರ್ ಅಹ್ಮದ್ ಉಲ್ಲಾ ಪಾದಯಾತ್ರೆ ಮೂಲಕ ಬೆಂಗಳೂರಿನಿಂದ, ಧರ್ಮಸ್ಥಳಕ್ಕೆ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಅವರು ಧರ್ಮಸ್ಥಳ ಬುರುಡೆ ಮತ್ತು ಶವಹೂತ ಪ್ರಕರಣದಕ್ಕೆ ಸಂಬಂಧಿಸಿದಂತೆ, ಯಾರೋ ನಾಲ್ಕೈದು ಕಿಡಿಗೇಡಿಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಎಸ್ಐಟಿ ( Special Investigation Team ) ತನಿಖೆ ನಡೆಯುತ್ತಿದೆ. ಹಾಗಾಗಿ ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಧರ್ಮಸ್ಥಳ ಪ್ರದೇಶದಲ್ಲಿ ಅಗೆದರೆ, ಬುರುಡೆ ಸಿಗುವುದಿಲ್ಲ. ಅಲ್ಲಿ, ಹೆಗ್ಗಡೆ ಕುಟುಂಬ ಕೊಟ್ಟ ಕೊಡುಗೆ ಸಿಗುತ್ತದೆ. ಮಕ್ಕಳಿಗೆ ಕೊಟ್ಟ ಶಿಕ್ಷಣವಾಗಿರಬಹುದು, ರೈತರಿಗೆ ಕೊಟ್ಟ ಅನುದಾನ ಇರಬಹುದು. ವೈದ್ಯಕೀಯ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಮರೆಯಲು ಸಾಧ್ಯವೇ ಎಂದು ತನ್ವೀರ್ ಅಹ್ಮದ್ ಪ್ರಶ್ನಿಸಿದ್ದಾರೆ.