ಬೆಳ್ತಂಗಡಿ ಸೆಪ್ಟೆಂಬರ್ 10: ಧರ್ಮಸ್ಥಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ ಐಟಿ ನಿನ್ನೆ ಕೇರಳದ ಯೂಟ್ಯೂಬರ್ ಮುನಾಫ್ ನನ್ನು ವಿಚಾರಣೆ ನಡೆಸಿದೆ. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುನಾಫ್ 40 ವರ್ಷಗಳ ಘಟನೆ 4 ದಿವಸದಲ್ಲಿ ಮುಗಿಯಬೇಕೆಂದರೆ ಆಗಲ್ಲ. ಎಸ್ಐಟಿ ಚೆನ್ನಾಗಿ ತನಿಖೆ ನಡೆಸುತ್ತಿದೆ ಎಂದರು.

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ನಿನ್ನೆ ಕೇರಳದ ಯೂಟ್ಯೂಬರ್ ಮುನಾಫ್, ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ., ‘ಯುನೈಟೆಡ್ ಮಿಡಿಯಾ’ ಯೂಟ್ಯೂಬ್ ಚಾನೆಲ್ನ ಅಭಿಷೇಕ್, ಸಾಕ್ಷಿ ದೂರುದಾರ ಪೊಲೀಸರಿಗೆ ಒಪ್ಪಿಸಿದ್ದ ಕಾಡಿನಲ್ಲಿ ಬುರುಡೆ ತೆಗೆದಿದ್ದ ಜಾಗ ತೋರಿಸಿದ್ದ ವಿಠಲ ಗೌಡ, ಸ್ಥಳೀಯ ನಿವಾಸಿ ಪ್ರದೀಪ್ ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದರು. ಜಯಂತ್ ಜೊತೆ ಅವರ ಸಂಬಂಧಿಕ ಮಹಿಳೆಯೂ ಹಾಜರಾದರು.
ಎಸ್ಐಟಿ ಕಚೇರಿ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಮುನಾಫ್, ‘ಎಸ್ಐಟಿ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿದೆ. ಬುರುಡೆ ಪ್ರಕರಣ ಮಾತ್ರ ಅಲ್ಲ; ಬೇರೆ ವಿಚಾರಗಳ ಬಗ್ಗೆಯೂ ವಿಚಾರಣೆ ನಡೆಸುತ್ತಿದೆ. ಸಾಕ್ಷಿ ದೂರುದಾರ ಕೋರ್ಟ್ನಲ್ಲಿ ದಾಖಲಿಸಿದ್ದ ಹೇಳಿಕೆ ಕುರಿತೂ ತನಿಖೆ ನಡೆಸುತ್ತಿದೆ’ ಎಂದರು. ‘ಸಾಕ್ಷಿ ದೂರುದಾರ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಬಳಿಕವಷ್ಟೇ ನಾನು ನನ್ನ ಯೂಟ್ಯೂಬ್ ವಾಹಿನಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ಪ್ರಸಾರ ಮಾಡಿದ್ದೆ. ಆ ದೃಶ್ಯಗಳನ್ನು ಇದೇ ಮೊಬೈಲ್ನಲ್ಲೇ ಚಿತ್ರೀಕರಿಸಿದ್ದೆ. ಕಾಡಿನಲ್ಲಿ ಬುರುಡೆಯನ್ನು ಹೊರತೆಗೆದಿದ್ದ ಸಂದರ್ಭದಲ್ಲಿ ನಾನು ಅಲ್ಲಿದ್ದೆನಾ, ಇಲ್ಲವೋ ಎಂಬುದನ್ನು ಎಸ್ಐಟಿ ಎದುರು ಹೇಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸೋಮವಾರ ರಾತ್ರಿ 11ರವರೆಗೂ ವಿಚಾರಣೆ ನಡೆಸಿದ್ದರು. ದಶಕಗಳ ಹಿಂದೆ ನಡೆದ ಕೃತ್ಯಗಳ ವಿಚಾರಣೆ ನಾಲ್ಕೇ ದಿನದಲ್ಲಿ ಮುಗಿಯಬೇಕು ಎಂದರೆ ಆಗದು. ಎಸ್ಐಟಿ ಮುಂದೆ ನನಗೆ ತಿಳಿದ ಸತ್ಯ ಹೇಳುತ್ತೇವೆ. ಸೌಜನ್ಯಾ ಪರ ಹೋರಾಟಗಾರರ ಜೊತೆಗೆ ಇರುವವರು ನಾವು. ನಮಗೆ ಭಯ ಇಲ್ಲ. ಸಾಕ್ಷಿ ದೂರುದಾರ ಮಾತು ಬದಲಿಸಿರಬಹುದು. ನಾವು ಕೊನೆಯವರೆಗೂ ಸೌಜನ್ಯಾ ಪರವಾಗಿ ನಿಲ್ಲುತ್ತೇವೆ’ ಎಂದರು.
‘ನಾನೂ ಕರ್ನಾಟಕದಲ್ಲೇ ಹುಟ್ಟಿ ಬೆಳೆದವ. ಬೆಳ್ತಂಗಡಿಯ ಅರಣ್ಯ ಇಲಾಖೆ ಡಿಪೊದಲ್ಲೂ ಕೆಲಸ ಮಾಡಿದ್ದೆ. ಕೇರಳದಿಂದ ಒಬ್ಬನೇ ಬಂದಿದ್ದೇನೆ. ಮಾನವ ಹಕ್ಕಿಗೆ ಸಂಬಂಧಿಸಿದ ಸರ್ಕಾರೇತರ ಸಂಘಟನೆಯಲ್ಲಿ ಸಕ್ರಿಯವಾಗಿರುವುದು ನಿಜ. ನನ್ನ ಕೆಲಸದ ಬಗ್ಗೆ ನನಗೆ ಸ್ಪಷ್ಟತೆ ಇದೆ’ ಎಂದು ತಿಳಿಸಿದರು.
40 ವರ್ಷಗಳ ಘಟನೆ 4 ದಿವಸದಲ್ಲಿ ಮುಗಿಯಬೇಕೆಂದರೆ ಆಗಲ್ಲ. ಎಸ್ಐಟಿ ಚೆನ್ನಾಗಿ ತನಿಖೆ ನಡೆಸುತ್ತಿದೆ. ನನ್ನಲ್ಲಿರುವ ವಿಷಯಗಳನ್ನೆಲ್ಲ ಹೇಳುತ್ತಿದ್ದೇನೆ. ನನಗೆ ಯಾವ ಭಯವೂ ಇಲ್ಲ. ನಾನು ಕೇರಳದಿಂದ ಒಬ್ಬನೇ ಬರುತ್ತಿದ್ದೇನೆ. ಪೊಲೀಸ್ ಭದ್ರತೆಯೊಂದಿಗೆ ಬರುತ್ತಿದ್ದೇನೆ ಎಂಬುದೆಲ್ಲ ಸುಳ್ಳು ಎಂದರು.



