ಬೆಂಗಳೂರು ಅಕ್ಟೋಬರ್ 30: ಧರ್ಮಸ್ಥಳ ಪ್ರಕರಣಕದ ತನಿಖೆಗೆ ತಡೆಯಾಜ್ಞೆ ತರಲು ಸೌಜನ್ಯ ಪರ ಹೋರಾಟಗಾರರು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದ ವರದಿ ಸುಳ್ಳಾಗಿದ್ದು, ಎಸ್ಐಟಿ ಅಧಿಕಾರಿಗಳು ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಹಾಗೂ ವಿಠಲಗೌಡ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ವಿಚಾರಣೆಗೆ ನವೆಂಬರ್ 12 ವರೆಗೂ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಾತ್ರವಲ್ಲದೇ, ಎಸ್ಐಟಿ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲ ಎಂದು ಸೂಚನೆ ನೀಡಿದೆ.

ಕನ್ನಡದ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬುರುಡೆ ಗ್ಯಾಂಗ್ ಧರ್ಮಸ್ಥಳ ಪ್ರಕರಣದ ಎಸ್ ಐಟಿ ತನಿಖೆಗೆ ತಡೆಗೆ ಕೋರ್ಟ್ ಮೆಟ್ಟಿಲೇರಿದೆ ಎಂದು ವರದಿಯಾಗಿತ್ತು, ಆದರೆ ಇಂದು ಹೈಕೋರ್ಟ್ ನಲ್ಲಿ ಮಾತ್ರ ನಡೆದಿದ್ದೆ ಬೆರೆ. ಎಸ್ಐಟಿ ಪೊಲೀಸರು ಹಾಕಿರುವ ಎಫ್ಐಆರ್ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಹಾಗೂ ವಿಠಲಗೌಡ ಸೇರಿ ನಾಲ್ವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠ ವಿಚಾರಣೆ ನಡೆಸಿತು. ಈ ಪ್ರಕರಣದ ಮೂಲ ದೂರುದಾರ ಸಿಎನ್ ಚಿನ್ನಯ್ಯ ಅವರ ದೂರಿನ ಮೇರೆಗೆ ತನಿಖೆ ನಡೆಯುತ್ತಿದ್ದು, ಅರ್ಜಿದಾರರು ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್ನ ಗಮನಕ್ಕೆ ತಂದಿದ್ದರು.

ಅರ್ಜಿದಾರರ ಪರ ವಕೀಲ ಬಾಲನ್ ವಾದ ಮಂಡಿಸಿದ್ದು, ನಮ್ಮ ಕಕ್ಷಿದಾರರಿಗೆ ಎಸ್ಐಟಿ 9 ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಎಫ್ಐಆರ್ನಲ್ಲಿ ನಮ್ಮನ್ನು ಆರೋಪಿಗಳೆಂದು ಉಲ್ಲೇಖ ಮಾಡಿಲ್ಲ. ಆರಂಭದಲ್ಲಿ 211(a) ಅಡಿ ಎಫ್ಐಆರ್ ದಾಖಲಿಸಿ ನಂತರ ಬೇರೆ ಸೆಕ್ಷನ್ ಸೇರಿಸಿದ್ದಾರೆ ಎಂದು ಕೋರ್ಟ್ನ ಗಮನಕ್ಕೆ ತಂದರು.
ಎಸ್ಐಟಿ ಪರ ಬಿ.ಎನ್. ಜಗದೀಶ್ ವಾದ ಮಂಡಿಸಿದ್ದು, ಅರ್ಜಿದಾರರ ಪ್ರಚೋದನೆ ಮೇಲೆಯೇ ಚಿನ್ನಯ್ಯ ದೂರು ನೀಡಿದ್ದಾನೆ. ಆರೋಪಿಗಳನ್ನಾಗಿಸಿ ಇವರಿಗೆ ನೋಟಿಸ್ ನೀಡಲಾಗಿದೆ ಎಂದರು.
ಈ ಪ್ರಕರಣದಲ್ಲಿ ತಮ್ಮನ್ನು 100 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ ಎಂದು ಅರ್ಜಿದಾರರಾದ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಹಾಗೂ ವಿಠಲಗೌಡ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಸಂಗ್ರಹಿಸಲಾದ 164 ಹೇಳಿಕೆಗಳಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪಗಳು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ. ಆದರೂ, ಅಕ್ಟೋಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ನೀಡಲಾಗಿತ್ತು ಎಂದು ಅರ್ಜಿದಾರರು ದೂರಿದ್ದಾರೆ.