LATEST NEWS
ಮಾಲಾಡಿ ಗ್ರಾಮದ ಕುಟುಂಬವೊಂದಕ್ಕೆ ಪ್ರೇತ ಬಾಧೆ -ಎಲ್ಲಾ ಸಮಸ್ಯೆ ಸರಿಯಾಗಿದೆ ಎಂದ ಕುಟುಂಬ

ಮಡಂತ್ಯಾರು ಫೆಬ್ರವರಿ 09: ಮನೆಯಲ್ಲಿ ಪ್ರೇತಬಾಧೆ ಇದೆ ಎಂದು ಸುದ್ದಿಯಾಗಿದ್ದ ಕೊಲೊದಬೈಲು ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಇದೀಗ ಎಲ್ಲಾ ಸಮಸ್ಯೆಗಳು ಪರಿಹಾರವಾಗಿದೆ ಎಂದು ಮನೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಕೊಲೊದಬೈಲು ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರೇತ ಬಾಧೆ ಇದೆ ಎಂದು ವರದಿಯಾಗಿತ್ತು. ಪ್ರತಿನಿತ್ಯ ರಾತ್ರಿ ಈ ಮನೆಯ ಕುಟುಂಬ ಸದಸ್ಯರು ವಿಚಿತ್ರ ಅನುಭವಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಮನೆಯೊಳಗೆ ಮಲಗಿದಾಗ ಯಾರೋ ಕುತ್ತಿಗೆ ಹಿಸುಕಿದಂತ ಅನುಭವ ಆಗುತ್ತಂತೆ. ಏಕಾಏಕಿ ಮನೆಯೊಳಗೆ ಇರುವ ಸ್ಟೀಲ್ ಲೋಟ, ಪಾತ್ರೆ ಪಗಡೆಗಳು ಚೆಲ್ಲಾಪಿಲ್ಲಿಯಾಗುತ್ತಂತೆ. ಮನೆ ಹೊರಗಿದ್ದ ಬಟ್ಟೆ ಒಳಗೆ ಬಂದು ಆ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತಂತೆ.

ಅಲ್ಲದೆ ಉಮೇಶ್ ಶೆಟ್ಟಿ ಪುತ್ರಿ ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಮೊಬೈಲ್ನಲ್ಲಿ ತೆಗೆದಿರುವ ಫೋಟೋದಲ್ಲಿ ಪ್ರೇತಾತ್ಮದ ಭಾವಚಿತ್ರ ಸೆರೆಯಾಗಿದೆ. ಈ ಫೋಟೋದಲ್ಲಿ ಬಿಳಿಯ ಮುಖ ಹೊಂದಿರುವ ವ್ಯಕ್ತಿ ನಿಂತಂತೆ ಭಾಸವಾಗುತಿದ್ದು, ಈ ಎಲ್ಲಾ ಬೆಳವಣಿಗೆಗಳು ಉಮೇಶ್ ಶೆಟ್ಟಿ ಕುಟುಂಬವನ್ನು ಆತಂಕಕ್ಕೆ ದೂಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೂರಾರು ಜನರು ಉಮೇಶ್ ಶೆಟ್ಟಿ ಅವರ ಮನೆ ಹತ್ತಿರ ಆಗಮಿಸಿದ್ದರು, ಈ ನಡುವೆ ಇಡೀ ಕುಟುಂಬ ಮನೆ ಬಿಟ್ಟು ತೆರಳಿತ್ತು, ಇದೀಗ ಮರಳಿ ಬಂದಿರುವ ಅವರು ಸಮಸ್ಯೆ ಎಲ್ಲಾ ನಿವಾರಣೆ ಆಗಿದೆ ಎಂದಿದ್ದಾರೆ. ಆದರೆ ಈಗ ಅವೆಲ್ಲ ನಿವಾರಣೆಯಾಗಿದೆ. ನಮ್ಮ ಮನೆಯ ದೈವದ ತೊಂದರೆಯಿಂದ ಹೀಗಾಗುತ್ತಿತ್ತು. ಅದಕ್ಕೆ ಪರಿಹಾರ ಮಾಡಿಕೊಳ್ಳಲಾಗಿದೆ ಅನಂತರ ಯಾವುದೇ ಸಮಸ್ಯೆ ಇಲ್ಲ ಈಗ ಎಲ್ಲಾ ಸರಿಯಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
ಬೀಗ ಹಾಕಿದ್ದ ಕಪಾಟಿನಲ್ಲಿದ್ದ ಚಿನ್ನವೂ ನಾಪತ್ತೆಯಾಗಿತ್ತು ಎಂದು ಮನೆಯವರು ಹೇಳಿದ್ದರು. ಆದರೆ ಇದೀಗ ಪತ್ತೆಯಾಗಿದೆ. ಅದು ದೇವರ ಫೋಟೋದ ಹಿಂದೆ ಇತ್ತು ಎಂದು ತಿಳಿಸಿದ್ದಾರೆ.