KARNATAKA
ದೇವಿ ಹೇಳಿದ ಜಾಗದಲ್ಲೇ ಸಿಕ್ತು ಮೂಲ ವಿಗ್ರಹ …!
ಚಿಕ್ಕಮಗಳೂರು, ಮೇ 11: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಹೊರಟ್ಟಿ ಸಮೀಪದ ಇತಿಹಾಸ ಪ್ರಸಿದ್ಧ ಗುಳಿಗ ದೈವದ ಮೂಲ ವಿಗ್ರಹ ಆ ದೇವಿ ಹೇಳಿದ ಜಾಗದಲ್ಲೇ ಪತ್ತೆಯಾಗಿದ್ದು, ಸ್ಥಳಿಯರು ಹಾಗೂ ಈ ಭಾಗದ ಪ್ರವಾಸಿಗರಿಗೆ ಗುಳಿಗ ದೈವದ ಮೇಲಿದ್ದ ದೈವದ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ.
ಕಳೆದ ಏಪ್ರಿಲ್ 24ರಂದು ಗುಳಿಗ ದೈವದ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೈವದ ದರ್ಶನದಲ್ಲಿ ಕ್ಷೇತ್ರದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ಗುಳಿಗ ದೈವದ ಮೂಲ ವಿಗ್ರಹ ಇದೆ. ಹುಡುಕಿದರೆ ವಿಗ್ರಹ ಸಿಗಲಿದೆ ಎಂದು ದೈವದ ದರ್ಶನದಲ್ಲಿ ದೇವಿಯೇ ಹೇಳಿದ್ದಳು. ಹಾಗಾಗಿ, ಗುಳಿಗ ದೈವದ ಕ್ಷೇತ್ರ ಅಭಿವೃದ್ಧಿಯ ಪದಾಧಿಕಾರಿಗಳು ಗುಳಿಗ ದೈವದ ದೇವಸ್ಥಾನದಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿ ಹುಡುಕಾಟ ನಡೆಸಿದ್ದಾರೆ. ಆಗ ಆಲೇಖಾನ್ ಎಸ್ಟೇಟ್ ಒಂದರ ಮರದ ಬುಡದಲ್ಲಿ ದೇವಿಯ ಮೂಲವಿಗ್ರಹ ಪತ್ತೆಯಾಗಿದೆ.
ದೇವಸ್ಥಾನದಿಂದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ನೋಡಿದಾಗ ದೇವಿನ ಕಂಚಿನಮೂರ್ತಿ, ಗಂಟೆ ಹಾಗೂ ಕತ್ತಿ ಪತ್ತೆಯಾಗಿವೆ. ನೂರಾರು ವರ್ಷಗಳ ಹಿಂದೆ ಈ ಜಾಗದಲ್ಲಿ ಚಾಮುಂಡೇಶ್ವರಿ, ಗುಳಿಗಮ್ಮ, ಬಬ್ಬುಸ್ವಾಮಿಗೆ ವಿಜೃಂಭಣೆಯಿಂದ ಪೂಜಾ, ವಿಧಿ-ವಿಧಾನಗಳು ನಡೆಯುತ್ತಿದ್ದವು. ಈಗ ಗುಳಿಗಮ್ಮ ದೇವಿ ಹೇಳಿರೋ ಜಾಗದಲ್ಲೇ ಪುರಾತನ ಮೂರ್ತಿಗಳು ಸಿಕ್ಕಿರೋದು ಕ್ಷೇತ್ರ ಹಾಗೂ ದೇವಿಯ ಮಹಿಮೆಯನ್ನ ಇಮ್ಮಡಿಗೊಳಿಸಿದೆ.
ದೇವಿ ಹೇಳಿದ ಜಾಗದಲ್ಲೇ ಮೂಲ ವಿಗ್ರಹ ಪತ್ತೆಯಾದ ಹಿನ್ನೆಲೆ ಭಕ್ತರು ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಈಗ ಸಿಕ್ಕಿರೋ ಪುರಾತನ ಮೂರ್ತಿಗಳನ್ನ ಅದೇ ಜಾಗದಲ್ಲಿ ಪುನರ್ ಪ್ರತಿಷ್ಠಾಪಿಸಿ ದೇವಿಯ ಹಿಂದಿನ ಗತಕಾಲದ ವೈಭವನ್ನು ಮತ್ತೆ ಮರುಕಳಿಸಲು ಯೋಚಿಸಿದ್ದಾರೆ. ಆದರೆ, ಈಗ ಗುಳಿಗ ದೈವ ಹೇಳಿರೋ ಜಾಗದಲ್ಲೇ ಮೂಲ ವಿಗ್ರಹ ಸಿಕ್ಕಿರೋದು ಮುಂದಿನ ದಿನಗಳಲ್ಲಿ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.
You must be logged in to post a comment Login