ಜೈಪುರ ಜನವರಿ 29: ರಾಜಸ್ಥಾನದ ಜೈಪುರದಲ್ಲಿ 25 ವರ್ಷದ ಖ್ಯಾತ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ ಅವರು ತಮ್ಮ ಆಶ್ರಮದಲ್ಲಿ ಕುಸಿದು ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಸಾಧ್ವಿ ಅವರು ಜ್ವರದಿಂದ ಬಳಲುತ್ತಿದ್ದರು ಮತ್ತು ಕಾಂಪೌಂಡರ್ ನೀಡಿದ ಇಂಜೆಕ್ಷನ್ ನಂತರ ಕುಸಿದು ಬಿದ್ದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆತ್ಮಹತ್ಯೆಯ ಪತ್ರದಂತಹ ಪೋಸ್ಟ್ ಕಾಣಿಸಿಕೊಂಡಿದೆ.
25 ವರ್ಷ ಪ್ರಾಯದ ಸಾಧ್ವಿ ಪ್ರೇಮ್ ಬೈಸಾ ಜ್ವರದಿಂದ ಬಳಲುತ್ತಿದ್ದರು, ಈ ನಡುವೆ ಆಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು, ಆದರೆ ಅಷ್ಟರಲ್ಲೇ ಅವರು ಸಾವನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಸಾಧ್ವಿಯ ಮರಣದ ಹಲವು ಗಂಟೆಗಳ ನಂತರ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದು ಕಾಣಿಸಿಕೊಂಡಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದೆ.
ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ

ನಾನು ಪ್ರತಿ ಕ್ಷಣವನ್ನು ಸನಾತನದ ಪ್ರಚಾರಕ್ಕಾಗಿ ಜೀವಿಸಿದ್ದೇನೆ. ಈ ಜಗತ್ತಿನಲ್ಲಿ ಸನಾತನ ಧರ್ಮಕ್ಕಿಂತ ದೊಡ್ಡ ಧರ್ಮವಿಲ್ಲ. ಇಂದು ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಹೃದಯದಲ್ಲಿ ಇದೆ. ನಾನು ಸನಾತನ ಧರ್ಮದಲ್ಲಿ ಜನಿಸಿದ್ದು ಪುಣ್ಯ ಮತ್ತು ಸನಾತನಕ್ಕಾಗಿ ಕೊನೆಯ ಉಸಿರು ಬಿಟ್ಟಿದ್ದೇನೆ. ಆದಿ ಜಗದ್ಗುರು ಶಂಕರಾಚಾರ್ಯ, ವಿಶ್ವ ಯೋಗ ಗುರುಗಳು ಮತ್ತು ಪೂಜ್ಯ ಸಂತ ಮಹಾತ್ಮರ ಆಶೀರ್ವಾದದ ಪ್ರತಿ ಕ್ಷಣವೂ ನನ್ನ ಜೀವನದಲ್ಲಿದೆ. ನಾನು ಆದಿ ಗುರು ಶಂಕರಾಚಾರ್ಯ ಮತ್ತು ದೇಶದ ಅನೇಕ ಮಹಾನ್ ಸಂತರಿಗೆ ಪತ್ರ ಬರೆದು ಅಗ್ನಿ ಪರೀಕ್ಷೆಗೆ ಕೋರಿದ್ದೆ ಆದರೆ ಏನು ಸಿಕ್ಕಿತು? ನಾನು ಈ ಲೋಕಕ್ಕೆ ಶಾಶ್ವತ ವಿದಾಯ ಹೇಳುತ್ತಿದ್ದೇನೆ. ಆದರೆ, ನನಗೆ ದೇವರಲ್ಲಿ ಮತ್ತು ಗೌರವಾನ್ವಿತ ಸಂತ ಮಹಾತ್ಮರಲ್ಲಿ ಪೂರ್ಣ ನಂಬಿಕೆಯಿದೆ. ನಾನು ಬದುಕಿದ್ದರೂ ಅಥವಾ ನಾನು ಹೋದ ಮೇಲಾದರೂ ನ್ಯಾಯ ಸಿಗುತ್ತದೆ ” ಎಂದು ಪೋಸ್ಟ್ನಲ್ಲಿದೆ.
ಕಳೆದ ವರ್ಷ, ಪ್ರೇಮ್ ಬೈಸಾ ಒಂದು ವಿವಾದದಲ್ಲಿ ಸಿಲುಕಿದ್ದರು. ಅವರ ಒಂದು ವಿಡಿಯೋ ವೈರಲ್ ಆಗಿತ್ತು, ಅದರಲ್ಲಿ ಸಾಧ್ವಿ ಅವರು ವ್ಯಕ್ತಿಯೊಬ್ಬರನ್ನು ಕೋಣೆಯೊಂದರಲ್ಲಿ ಅಪ್ಪಿಕೊಳ್ಳುತ್ತಿರುವುದು ಕಂಡುಬಂದಿತ್ತು. ಆ ಕ್ಲಿಪ್ನಲ್ಲಿ ಇನ್ನೊಬ್ಬ ಮಹಿಳೆ ಕೋಣೆಗೆ ಬಂದು ಹೊದಿಕೆಯನ್ನು ತೆಗೆದುಕೊಂಡು ಹೋಗಿ ಹೊರಗೆ ಹೋಗುತ್ತಿರುವುದು ಕೂಡ ಕಾಣಿಸಿತ್ತು. ಸಾಧ್ವಿ ಅವರು ಇದನ್ನು ಪ್ರೀತಿಯ ಅಭಿವ್ಯಕ್ತಿ ಎಂದು ಕರೆದಿದ್ದರು. ತಂದೆ-ಮಗಳ ಸಂಬಂಧವನ್ನು ಅವಮಾನಿಸುವ ಪ್ರಯತ್ನ ಎಂದು ಅವರು ಹೇಳಿದ್ದರು. ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ, ವಿಡಿಯೋವನ್ನು ವೈರಲ್ ಮಾಡಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.