ದಾವಣಗೆರೆ , ಏಪ್ರಿಲ್ 19 : ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ದೇವರಾಜ ಅರಸು ಬಡಾವಣೆಯ ರೈಲ್ವೆ ಕ್ವಾರ್ಟರ್ಸ್ನಲ್ಲಿ ನಡೆದಿದೆ. ಮೃತರನ್ನು 26 ವರ್ಷದ ಕಾವ್ಯಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಯುವತಿಯ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

ಮೂಲತಃ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದವರಾದ ಕಾವ್ಯಾ (26) ಅವರಿಗೆ ಎರಡು ವರ್ಷಗಳ ಹಿಂದೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನು ಎಂಬಾತನೊಂದಿಗೆ ವಿವಾಹವಾಗಿತ್ತು. ಮನು ಸರ್ಕಾರಿ ನೌಕರನಾಗಿದ್ದ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮನುಗೆ ಮಾದಕ ವ್ಯಸನ ಹಾಗೂ ಪರಸ್ತ್ರೀ ಸಹವಾಸದ ಚಟವಿರುವುದು ಬೆಳಕಿಗೆ ಬಂದಿತ್ತು. ಇದರಿಂದ ದಂಪತಿಗಳ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು. ಪತಿ ಮನುವಿಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಇರುವ ಬಗ್ಗೆ ಕಾವ್ಯ ದಾಖಲೆ ಸಂಗ್ರಹ ಮಾಡಿದ್ದಳು. ಅನ್ಯ ಯುವತಿ ಜೊತೆ ಆತ ಚಾಟ್ ಮಾಡಿದ್ದ ಸ್ಕ್ರೀನ್ ಶಾಟ್ ಅನ್ನು ಕಾವ್ಯ ಸಂಗ್ರಹಿಸಿದ್ದಳು. ಇದನ್ನು ಪೆನ್ಡ್ರೈವ್ನಲ್ಲಿ ಸೇವ್ ಮಾಡಿದ್ದ ಕಾವ್ಯ ತವರು ಮನೆಯಲ್ಲಿ ತನ್ನ ತಮ್ಮನ ಬ್ಯಾಗ್ನಲ್ಲಿ ಇರಿಸಿದ್ದಳು ಎಂದು ಪೋಷಕರು ಹೇಳಿದ್ದಾರೆ.
ಆದರೆ ಈಗ ಮಗಳು ದಾವಣಗೆರೆಯ ಅಂಚೆ ಇಲಾಖೆ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದು, ಗಂಡ ಮನುವೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕಾವ್ಯಾಳ ಪೋಷಕರು ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.