LATEST NEWS
ಮಂಗಳೂರು ಶಾಲಾ, ಕಾಲೇಜುಗಳಿಗೆ ಸೆಪ್ಟೆಂಬರ್ 30 ರಿಂದಲೇ ದಸರಾ ರಜೆ ಕೊಡಲು ಶಾಸಕ ಕಾಮತ್ ಸಚಿವರಿಗೆ ಮನವಿ
ಮಂಗಳೂರು ಶಾಲಾ, ಕಾಲೇಜುಗಳಿಗೆ ಸೆಪ್ಟೆಂಬರ್ 30 ರಿಂದಲೇ ದಸರಾ ರಜೆ ಕೊಡಲು ಶಾಸಕ ಕಾಮತ್ ಸಚಿವರಿಗೆ ಮನವಿ
ಮಂಗಳೂರು ಸೆಪ್ಟೆಂಬರ್ 17: ಮಂಗಳೂರಿನಲ್ಲಿ ನವರಾತ್ರಿ ಸಂಭ್ರಮ ಸೆಪ್ಟೆಂಬರ್ 30 ರಿಂದಲೇ ಆರಂಭವಾಗಲಿದ್ದು ಅದಕ್ಕೆ ಸರಿಯಾಗಿ ದಸರಾ ರಜೆಯನ್ನು ಮಂಜೂರು ಮಾಡಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ರಾಜ್ಯ ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿಯಾದ ಶಾಸಕ ಕಾಮತ್ ಅವರು, ಹೇಗೆ ಮೈಸೂರು ದಸರಾ ಸುಪ್ರಸಿದ್ಧವಾಗಿದೆಯೋ ಹಾಗೆಯೇ ಮಂಗಳೂರು ದಸರಾ ಕೂಡ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತದೆ.
ಮಂಗಳೂರಿನಲ್ಲಿ ನವರಾತ್ರಿಯ ಧಾರ್ಮಿಕ ವಿಧಿವಿಧಾನಗಳು ಸೆಪ್ಟೆಂಬರ್ 28 ರಿಂದಲೇ ಆರಂಭವಾಗುತ್ತದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ, ಕಾರ್ಯಕ್ರಮಗಳು ಪ್ರಾರಂಭವಾಗುವುದರಿಂದ ಅದರಲ್ಲಿ ಭಾಗವಹಿಸುವ ಪೋಷಕರಿಗೆ, ಮಕ್ಕಳಿಗೆ, ಶಿಕ್ಷಕರಿಗೆ ರಜೆ ಇದ್ದಲ್ಲಿ ಸಾಕಷ್ಟು ಅನುಕೂಲವಾಗುತ್ತದೆ.
ಅಕ್ಟೋಬರ್ 6 ರಿಂದ ರಜೆ ನೀಡಿದರೆ ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜು ಮಕ್ಕಳಿಗೆ ತುಂಬಾ ಅನಾನುಕೂಲವಾಗುತ್ತದೆ. ರಾಜ್ಯದ ಬೇರೆಡೆಗೆ ಹೋಲಿಸಿದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿಯ ಆಚರಣೆಗಳು ವಿಶೇಷವಾಗಿದ್ದು ಮಾನ್ಯ ಸಚಿವರು ಈ ಬಗ್ಗೆ ಪರಾಮರ್ಶಿಸಿ ರಜೆಯನ್ನು ಸೆಪ್ಟೆಂಬರ್ 30 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆಯನ್ನು ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.
You must be logged in to post a comment Login