DAKSHINA KANNADA
ರಾಜಕಾಲುವೆ ಒತ್ತುವರಿ ತೆರವು ಒಕೆ, ನದಿಯನ್ನೇ ನುಂಗಿದ ಕಟ್ಟಡದ ತೆರವಿಲ್ಲ ಯಾಕೆ ?
ರಾಜಕಾಲುವೆ ಒತ್ತುವರಿ ತೆರವು ಒಕೆ, ನದಿಯನ್ನೇ ನುಂಗಿದ ಕಟ್ಟಡದ ತೆರವಿಲ್ಲ ಯಾಕೆ ?
ಪುತ್ತೂರು, ಮೇ 31: ಮೇ 29 ರಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆ ಇಡೀ ಜಿಲ್ಲೆಯ ಜನರ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.
ಮಂಗಳೂರು ನಗರ ಮಳೆಗೆ ಸಂಪೂರ್ಣ ಮುಳುಗಡೆಯಾದರೆ, ಜಿಲ್ಲೆಯ ಹಲವಡೆಗಳಲ್ಲಿ ಚರಂಡಿಯಲ್ಲಿ ಹರಿಯುವ ನೀರು ಮನೆಯೊಳಗೆ ಹರಿದಿದೆ.
ಜಿಲ್ಲೆಯಲ್ಲಿ ಈ ರೀತಿಯ ನೀರಿನಾವತಾರಕ್ಕೆ ಒಂದಡೆ ನಿರಂತರವಾಗಿ ಸುರಿದ ಕುಂಭದ್ರೋಣ ಮಳೆ ಕಾರಣವಾದರೆ, ಇನ್ನೊಂದೆಡೆ ನೀರು ಹರಿಯಲು ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಇದೀಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಎಲ್ಲಾ ರಾಜಕಾಲುವೆ, ತೊರೆ, ಹಳ್ಳಗಳ ಒತ್ತುವರಿಯನ್ನು ತೆರವುಗೊಳಿಸಲು ನಿರ್ಧರಿಸಿದೆ.
ಈ ಎಲ್ಲಾ ತೊರೆ, ಹಳ್ಳಗಳ ನೀರುಗಳು ಜಿಲ್ಲೆಯ ಪ್ರಮುಖ ಜೀವನದಿಯಾದ ನೇತ್ರಾವತಿ ನದಿಯನ್ನೇ ಹೆಚ್ಚಾಗಿ ಸೇರುತ್ತಿದೆ.
ಆದರೆ ಈ ನದಿಯನ್ನೇ ಇಂದು ಒತ್ತುವರಿ ಮಾಡಿಕೊಂಡು ನದಿಯ ಮೇಲೆಯೇ ಕಟ್ಟಡಗಳನ್ನು ಕಟ್ಟಲಾಗುತ್ತಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕುಟೇಲು ಸೇತುವೆ ಬಳಿಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡದ ಒಂದಂಶ ನೇತ್ರಾವತಿ ನದಿಯಲ್ಲೇ ನಿರ್ಮಾಣಗೊಂಡಿದೆ.
ನದಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣಗೊಂಡಿರುವ ಈ ಕಟ್ಟಡದ ಭಾಗವನ್ನು ತೆರವುಗೊಳಿಸಬೇಕೆಂದು ಪುತ್ತೂರು ಸಹಾಯಕ ಕಮಿಷನರ್ ಕಟ್ಟಡ ಮಾಲಿಕನಿಗೆ ನೋಟೀಸ್ ಜಾರಿ ಮಾಡಿ ವರ್ಷಗಳೇ ಕಳೆದಿದೆ.
ಅಲ್ಲದೆ ಸ್ಥಳೀಯ ಉಪ್ಪಿನಂಗಡಿ ಗ್ರಾಮಪಂಚಾಯತ್ ಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನೂ ನೀಡಲಾಗಿದೆ.
ಆದರೆ ಈ ವರೆಗೆ ಈ ಕಟ್ಟಡವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿಲ್ಲ.
ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ರಾಜ ಕಾಲುವೆ, ತೊರೆ, ತೋಡುಗಳ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಲು ಕಾರ್ಯಕ್ರಮ ಉತ್ತಮ ನಡೆಯಾಗಿದೆ.
ಅದರ ಜೊತೆಗೆ ಇಂಥಹ ನದಿಯನ್ನೇ ನುಂಗಿದ ಕುಳಗಳ ವಿರುದ್ಧವೂ ಕಾರ್ಯಾಚರಣೆ ನಡೆಯಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
You must be logged in to post a comment Login