ಮಂಗಳೂರು ಸೆಪ್ಟೆಂಬರ್ 13: ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದಲ್ಲದೇ ಆಕೆಯನ್ನು ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಎಫ್ಟಿಎಸ್ಸಿ–2 (ಪೋಕ್ಸೊ) ಮರಣದಂಡನೆ ವಿಧಿಸಿದೆ. ಬೆಳವಾಗಿ ಜಿಲ್ಲೆ ಸವದತ್ತಿ ತಾಲ್ಲೂಕು ಹಂಚಿನಾಳ ಗ್ರಾಮದ ಫಕೀರಪ್ಪ ಹಣಮಪ್ಪ ಮಾದರ (58) ಶಿಕ್ಷೆಗೆ ಒಳಗಾದವ. ಇಲ್ಲಿನ ವಸತಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸುರತ್ಕಲ್ ಸಮೀಪದ ಚಿಕ್ಕಪ್ಪನ ಬಾಡಿಗೆ ಮನೆಗೆ ತೆರಳಿದ್ದಳು. 2024ರ ಆಗಸ್ಟ್ 6ರಂದು ಚಿಕ್ಕಪ್ಪ ಮತ್ತು ಚಿಕ್ಕಮ್ಮ ಹೊರಗೆ ಹೋಗಿದ್ದಾಗ, ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ಫಕೀರಪ್ಪ ಅಕ್ರಮವಾಗಿ ಮನೆಗೆ ಪ್ರವೇಶಿಸಿ ದೌರ್ಜನ್ಯ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.

ಈ ಸಂಬಂಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎಸ್ ಮಾನು ಅವರು ಅಪರಾಧ ಸಾಬೀತಾದ ಕಾರಣ ಶಿಕ್ಷೆ ಪ್ರಕಟಿಸಿದರು. ಭಾರತೀಯ ನ್ಯಾಯಸಂಹಿತೆಯ (ಬಿಎನ್ಎಸ್) ಕಲಂ 103(1)ರ ಪ್ರಕಾರ ಕೊಲೆ ಪ್ರಕರಣದಲ್ಲಿ ಆತನಿಗೆ ಮರಣದಂಡನೆಯಾಗಿದ್ದು ಪೋಕ್ಸೊ ಕಾಯ್ದೆಯ ಕಲಂ 4(2)ರಲ್ಲಿ ಜೀವಾವಧಿ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಲಾಗಿದೆ. ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿದ್ದಕ್ಕೆ ಬಿಎನ್ಎಸ್ನ ಕಲಂ 332 (ಎ) ಪ್ರಕಾರ ಜೀವಾವಧಿ ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಲಾಗಿದೆ.
ಕೊಲೆಯಾದ ಬಾಲಕಿಯ ಪೋಷಕರಿಗೆ ₹1 ಲಕ್ಷ ಪಾವತಿಸುವಂತೆಯೂ ಆದೇಶಿಸಿದ್ದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ₹ 4 ಲಕ್ಷ ಪರಿಹಾರ ನೀಡಬೇಕು ಎಂದೂ ಸೂಚಿಸಲಾಗಿದೆ. ಪಣಂಬೂರು ಠಾಣೆಯ ಇನ್ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್ ದೋಷಾರೋಪ ಪತ್ರ ಸಲ್ಲಿಸಿದ್ದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಹನಾ ದೇವಿ ಬೋಳೂರು ವಾದ ಮಂಡಿಸಿದ್ದರು.
ಅಪ್ರಾಪ್ತ ಬಾಲಕಿ ಕೊಲೆಗೆ ಮುನ್ನಾ ದಿನ ನೆರೆಮನೆಯ ಮಹಿಳೆಯೊಬ್ಬರ ಫೋನ್ ಮೂಲಕ ತನ್ನ ತಾಯಿಗೆ ಕರೆ ಮಾಡಿ ಜ್ವರವಿರುವ ಬಗ್ಗೆ ಹೇಳಿದ್ದಳು. ಮರುದಿನ ತಾಯಿ ಕರೆ ಮಾಡಿ, ಮಗಳಿಗೆ ಫೋನ್ ಕೊಡುವಂತೆ ಹೇಳಿದ್ದರು. ಮಹಿಳೆ ಬಾಲಕಿ ಇರುವ ಮನೆಗೆ ಬಂದಾಗ ಆರೋಪಿ ಫಕೀರಪ್ಪ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದು ಕಂಡಿತ್ತು. ಇದನ್ನು ನೋಡಿ ಮಹಿಳೆಯರು ಆತಂಕಿತರಾಗಿದ್ದು, ಆರೋಪಿ ಈ ವಿಷಯ ಯಾರಿಗೂ ಹೇಳದಂತೆ ಮಹಿಳೆಯರಿಗೆ ಬೆದರಿಸಿ ಅಲ್ಲಿಂದ ತೆರಳಿದ್ದ. ಕೋರ್ಟ್ ವಿಚಾರಣೆ ವೇಳೆ ಇಬ್ಬರು ಮಹಿಳೆಯರು ಘಟನೆಯ ಪ್ರತ್ಯಕ್ಷ ಸಾಕ್ಷಿ ಹೇಳಿದ್ದು ಪ್ರಮುಖವಾಗಿತ್ತು. ಉಳಿದಂತೆ ಆರೋಪಿ ಬಟ್ಟೆಯಲ್ಲಿದ್ದ ರಕ್ತ ಹಾಗೂ ಬಾಲಕಿ ರಕ್ತದ ಸ್ಯಾಂಪಲ್ ಹೋಲಿಕೆಯಾಗಿದೆ. ಬಾಲಕಿಯ ಮುಖದಲ್ಲಿದ್ದ ಗಾಯದ ಗುರುತು ಮತ್ತು ಆರೋಪಿಯ ಹಲ್ಲಿನ ಚಹರೆ ಹೋಲಿಕೆಯಾಗಿದೆ.



