ಮಂಗಳೂರು ಜನವರಿ 20: ಏಳಿಂಜೆ ಗ್ರಾಮದಲ್ಲಿ 2020ರಲ್ಲಿ ನಡೆದಿದ್ದ ವಿನ್ಸೆಂಟ್ ಡಿಸೋಜ–ಹೆಲೆನ್ ಡಿಸೋಜ ದಂಪತಿ ಕೊಲೆ ಮಾಡಿದ ಆರೋಪಿ ನೆರೆಮನೆಯ ಆಲ್ಫೋನ್ಸ್ ಸಲ್ಡಾನ ಅವರಿಗೆ ಮಂಗಳೂರಿನ ಎರಡನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

2020ರ ಎಪ್ರಿಲ್ 29ರಂದು ಆರೋಪಿ ಆಲ್ಫೋನ್ಸ್ ಸಲ್ದಾನ ಎಂಬಾತ ತನ್ನ ನೆರೆಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜಾ ಜೊತೆಗೆ ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿದ್ದ. ಬಳಿಕ ವಿನ್ಸೆಂಟ್ ಡಿಸೋಜಾನನ್ನು ರಾಜಿ ಪಂಚಾಯತಿಕೆ ಮಾಡುವ ನೆಪದಲ್ಲಿ ತನ್ನ ಮನೆಗೆ ಕರೆಸಿ ಗಲಾಟೆ ಮಾಡಿ ಚೂರಿಯಿಂದ ತಿವಿದು ಕೊಲೆ ಮಾಡಿದ್ದ. ಈ ವೇಳೆ, ರಕ್ಷಿಸಲು ಧಾವಿಸಿ ಬಂದ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜಾನ ಪತ್ನಿ ಶ್ರೀಮತಿ ಹೆಲೆನ್ ಡಿ.ಸೋಜಾ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನೂ ಅಟ್ಟಾಡಿಸಿ ಚೂರಿಯಿಂದ ಅಮಾನುಷವಾಗಿ ತಿವಿದು ಕೊಲೆಗೈದಿದ್ದ.

ಸ್ನೇಹಿತರಾಗಿದ್ದ ಆಲ್ಫೋನ್ಸ್ ಸಲ್ಡಾನ ಮತ್ತು ನೆರಮನೆಯ ವಿನ್ಸೆಂಟ್ ಡಿಸೋಜ ಸಂಬಂಧ ಕ್ರಮೇಣ ಹಳಸಿತ್ತು. ಆಲ್ಫೋನ್ಸ್ ಜಾಗದಲ್ಲಿದ್ದ ಮರದ ಕೊಂಬೆಗಳು ವಿನ್ಸೆಂಟ್ ಜಾಗದತ್ತ ಚಾಚಿಕೊಂಡಿದ್ದವು. ಇವುಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಈ ವಿವಾದ ಇತ್ಯರ್ಥಕ್ಕಾಗಿ ಆಲ್ಫೋನ್ಸ್ 2020ರಲ್ಲಿ ಏಪ್ರಿಲ್ 29ರಂದು ವಿನ್ಸೆಂಟ್ ಅವರನ್ನು ಮನೆಗೆ ಕರೆಸಿಕೊಂಡಿದ್ದ. ಮರದ ಕೊಂಬೆಗಳನ್ನು ತೆರವುಗೊಳಿಸಲು ನಿರಾಕರಿಸಿದ್ದ ಆತ, ಜಗಳ ಕಾಯ್ದು ಸ್ಥಳದಲ್ಲಿದ್ದ ಹಾರೆಯನ್ನು ಹಿಡಿದು ವಿನ್ಸೆಂಟ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಬಳಿಕ ಅಡುಗೆ ಮನೆಯಿಂದ ಚೂರಿಯನ್ನು ತಂದು ವಿನ್ಸೆಂಟ್ಗೆ ಇರಿದಿದ್ದ. ಪತಿಯ ರಕ್ಷಣೆಗೆ ಧಾವಿಸಿದ ವಿನ್ಸೆಂಟ್ ಪತ್ನಿ ಹೆಲೆನ್ ಎದೆ ಹಾಗೂ ಸೊಂಟಕ್ಕೂ ಚೂರಿಯಿಂದ ತಿವಿದಿದ್ದ. ವಿನ್ಸೆಂಟ್ ಸ್ಥಳದಲ್ಲೇ ಅಸುನೀಗಿದ್ದರೆ, ಹೆಲೆನ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದರು.
ಮೂಲ್ಕಿ ಠಾಣೆಯ ಆಗಿನ ಪಿಎಸ್ಐ ಶೀತಲ್ ಆಲಗೂರು ಪ್ರಕರಣ ದಾಖಲಿಸಿಕೊಂಡಿದ್ದರು. ನ್ಯಾಯಾಲಯಕ್ಕೆ ಇನ್ಸ್ಪೆಕ್ಟರ್ ಜಯರಾಮ ಗೌಡ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎನ್ ನಡೆಸಿದ್ದರು. ನಂತರ ಪ್ರಕರಣವು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಆಲ್ಫೋನ್ಸ್ ಸಲ್ಡಾನ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಜಗದೀಶ್ ವಿ.ಎನ್ ತೀರ್ಪು ನೀಡಿದ್ದಾರೆ.
ಆಲ್ಫೋನ್ಸ್ ಸಲ್ಡಾನ ಜೈಲಿನಲ್ಲಿದ್ದಾನೆ. ಆತನಿಗೆ ಮದುವೆಯಾಗಿಲ್ಲ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಆತ ಕುಟುಂಬದ ಕೃಷಿ ಜಮೀನು ನೋಡಿಕೊಳ್ಳಲು ಹುಟ್ಟೂರಾದ ಏಳಿಂಜೆಗೆ ಮರಳಿದ್ದ. ಆತ ಮನೆ ನಿರ್ಮಿಸಲು ವಿನ್ಸೆಂಟ್ ಡಿಸೋಜ ಹಾಗೂ ನೆರೆ ಕರೆಯವರು ನೆರವಾಗಿದ್ದರು. ನಂತರ ಅವರ ನಡುವೆಯೇ ವೈಮನಸ್ಸು ಬೆಳೆದಿತ್ತು.
ದಂಪತಿ ಕೊಲೆಯಾದಾಗ ಅವರಿಗೆ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಮಗಳು ಹಾಗೂ 5ನೇ ತರಗತಿಯಲ್ಲಿ ಕಲಿಯುತ್ತಿದ್ದ ಮಗ ಇದ್ದರು. ಅಪ್ರಾಪ್ತ ವಯಸ್ಸಿನ ಆ ಇಬ್ಬರೂ ಅನಾಥರಾಗಿದ್ದರು. ಬಳಿಕ ಹೆಲೆನ್ ಅವರ ಸೋದರಿ ಅವರನ್ನು ಬೆಳೆಸಿದ್ದರು. ಇದೀಗ ನ್ಯಾಯಾಲಯ ಆರೋಪಿಗೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಸಾಕ್ಷಿ ವಿಚಾರಣೆ ಸಮಯ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಸಂತ್ರಸ್ತರ ಪರ ವಾದ ಮಂಡಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ನೆರಮನೆಯವರ ಸಾವಿಗೆ ಕಾರಣನಾಗಿದ್ದ ಆರೋಪಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ತಂದೆ ತಾಯಿಯರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.