ಉಡುಪಿ ಮಾರ್ಚ್ 13: ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ಭೀತಿ ಹಿನ್ನಲೆ ನಿನ್ನೆಯಿಂದ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ರಾಜ್ಯ ಸರಕಾರದ ಆದೇಶವನ್ನು ಸ್ವತಃ ಸರಕಾರದ ಜನಪ್ರತಿನಿಧಿಗಳೇ ಮುರಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಸಾರ್ವಜನಿಕರಿಗೆ ಪ್ರಕರಣ ದಾಖಲಿಸಲು ಎಚ್ಚರಿಕೆ ನೀಡುವ ಜಿಲ್ಲಾಧಿಕಾರಿ ಈಗ ಸೈಲೆಂಟ್ ಆಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಈಗಾಗಲೇ ದೇಶದಾದ್ಯಂತ ಕೊರೊನಾ ಎರಡನೇ ಅಲೆಯ ಭೀತಿ ಎದುರಾಗಿದ್ದು, ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನಲೆ ರಾಜ್ಯದಲ್ಲಿ ಕೂಡ ಈಗ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಯಾವುದೇ ಸಮಾರಂಭದಲ್ಲಿ 500ಕ್ಕೂ ಅಧಿಕ ಮಂದಿ ಸೇರಬಾರದೆಂದು ಆದೇಶಿಸಲಾಗಿದ್ದು, ಮಾಸ್ಕ್ ನ್ನು ಕಡ್ಡಾಯಗೊಳಿಸಲಾಗಿದೆ.

ಆದರೆ ಕೋಟದಲ್ಲಿ ನಡೆಯುತ್ತಿರುವ ಹೊಳಪು ಕ್ರೀಡಾಕೂಟದಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದ್ದು, ಕ್ರಿಡಾಕೂಟದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ.

ಇನ್ನು ಸ್ವತ: ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಮಾಸ್ಕ್ , ಸಾಮಾಜಿಕ ಅಂತರ ಮರೆತು ಭಾಗವಹಿಸಿದ್ದಾರೆ.

3 ಸಾವಿರ ಜನ ಸೇರಿರುವ ಕ್ರೀಡಾಕೂಟದಲ್ಲಿ ಮಾಸ್ಕ್ ಸ್ಯಾನಿಟೈಸ್ ನಾಪತ್ತೆಯಾಗಿದೆ. ನಳೀನ್ ಕುಮಾರ್ ಸೇರಿದಂತೆ ತಾಲೂಕು ಪಂಚಾಯತ್, ಗ್ರಾಮಪಂಚಾಯತ್, ಪುರಸಭೆ, ನಗರಸಭೆ, ಜಿಲ್ಲಾಪಂಚಾಯತ್ ಪ್ರತಿನಿಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.





