ಮಂಗಳೂರು: ಬೋಳೂರಿನ ಐತಿಹಾಸಿಕ ಜಾರಂದಾಯ ದೈವಸ್ಥಾನದಲ್ಲಿ ಕಳೆದ ಫೆಬ್ರವರಿ 1ರಂದು ನಡೆದ ನೇಮೋತ್ಸವದಲ್ಲಿ ದೈವಾರಾಧನೆಯ ಮೂಲ ನಂಬಿಕೆ ಮತ್ತು ಸಂಪ್ರದಾಯಕ್ಕೆ ಚ್ಯುತಿ ತರುವಂತಹ ಘಟನೆ ನಡೆದಿದೆ ಎಂದು ಪಂಬದ ಸಮುದಾಯದ ಸಂಶೋಧಕಿ ಡಾ.ರತಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ, ನಲಿಕೆಯವರು ಇತ್ಯಾದಿ 16 ಜಾತಿಗಳವರು ಮಾಡಬೇಕೇ ವಿನಾ ಬೇರೆ ಜಾತಿಯವರು ಮಾಡುವಂತಿಲ್ಲ. ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಬಾಯಾರು ನಿವಾಸಿ ಗಣೇಶ ಪಂಬದ ಎಂಬುವವರು ನೇಮದ ಜವಾಬ್ದಾರಿ ವಹಿಸಿಕೊಂಡಿದ್ದು, ಆರ್ಥಿಕ ಲಾಭಕ್ಕಾಗಿ ದೈವ ನರ್ತನದ ಪವಿತ್ರ ಕಾರ್ಯಕ್ಕೆ ಕ್ರಿಶ್ಚಿಯನ್ ಸಮುದಾಯದ ಯುವಕನನ್ನು ಬಳಸಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಮೂಲಕ ತುಳುನಾಡಿನ ದೈವಾರಾಧನೆಯ ಆಚಾರ-ವಿಚಾರಗಳಿಗೆ ದ್ರೋಹ ಬಗೆಯಲಾಗಿದೆ ಆರೋಪಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಬೋಳೂರಿನ ಜಾರಂದಾಯ ದೈವಸ್ಥಾನದಲ್ಲಿ ನೇಮೋತ್ಸವ ಸೇವೆಯು ನಡೆದುಕೊಂಡು ಬಂದಿದ್ದು, ಪಂಬದ ಸಮುದಾಯದ ದೈವನರ್ತಕರು ಇಲ್ಲಿನ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಪ್ರಾರಂಭದಲ್ಲಿ ಇದನ್ನು ಶ್ರೀ ಸುಬ್ಬಣ್ಣ ಪಂಬದ, ನಂತರದ ಕಾಲಘಟ್ಟದಲ್ಲಿ ಭಾಸ್ಕರ ಪಂಬದ ಪದವಿನಂಗಡಿ, ಆ ಬಳಿಕ ಮುಲ್ಕಿಯ ಕುಮಾರ ಪಂಬದರವರು ಇಲ್ಲಿ ನರ್ತನ ಸೇವೆಯನ್ನು ನೀಡಿರುತ್ತಾರೆ. 2026ನೇ ಸಾಲಿನ ನೇಮೋತ್ಸವ ಸಂದರ್ಭದಲ್ಲಿ ಆಡಳಿತ ಕಮಿಟಿಯು ದೈವನರ್ತಕರನ್ನು ಬದಲಾಯಿಸಲು ತೀರ್ಮಾನಿಸಿ ಕೇರಳದ ಕಾಸರಗೋಡಿನ ಬಳಿ ಇರುವ ಚಿಪ್ಪಾರು ಬಾಯಾರಿನ ಗಣೇಶ ಪಂಬದ (S/o ಮಾರು) ಅವರನ್ನು ನೇಮಕ ಮಾಡಿರುತ್ತಾರೆ. ಗಣೇಶ್ ಹಾಗೂ ಆತನ ಅಕ್ಕನ ಮಗನಾದ ಸೂರಜ್ ಇವರುಗಳು ನೇಮೋತ್ಸವದ ಜವಾಬ್ದಾರಿಯನ್ನು ಹೊತ್ತಿದ್ದು, ಅದಕ್ಕಾಗಿ ಪೂರಕ ಪರಿಚಾರಕ ವರ್ಗವನ್ನು ನೇಮಿಸುವ ಬದಲಾಗಿ ಕಡಿಮೆ ಸಂಬಳ ಪಾವತಿಯ ಮಾರ್ಗವನ್ನು ಅನುಸರಿಸಿದುದರ ಪರಿಣಾಮವಾಗಿ ಪದವಿನಂಗಡಿಯ ದಿವಂಗತ ಗಣೇಶ್ ಪಂಬದರ ಕ್ರಿಶ್ಚಿಯನ್ ಪತ್ನಿಗೆ ಜನಿಸಿದ ಪುತ್ರನನ್ನು ನೇಮ ಕಟ್ಟಲು ಬಳಸಿದ್ದು ನಮಗೆಲ್ಲಾ ಆಘಾತಕಾರಿ ವಿಷಯವಾಗಿದೆ. ದಿವಂಗತ ಗಣೇಶ್ ಪಂಬದರಿಗೆ ಎರಡು ಮದುವೆಯಾಗಿದ್ದು. ಪ್ರಥಮ ಪತ್ನಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕೆಲ ಕಾಲಾನಂತರ ಅವರು ತಮ್ಮ ಕ್ರಿಶ್ಚಿಯನ್ ಪತ್ನಿಯನ್ನು ತ್ಯಜಿಸಿ ವಿಶ್ವಕರ್ಮ ಸಮುದಾಯದ ಹೆಣ್ಣನ್ನು ವಿವಾಹವಾಗಿ ಮೂರು ಮಕ್ಕಳು ಜನಿಸಿರುತ್ತಾರೆ. ಕೆಲವೊಂದು ದುರಭ್ಯಾಸಗಳಿಂದಾಗಿ ಪದವಿನಂಗಡಿ ಗಣೇಶ್ ಪಂಬದರು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.
ಬಾಯಾರು ಗಣೇಶ್ ಪಂಬದರು ಇಂತಹ ಕೃತ್ಯ ನಡೆಸಿದುದು ನನ್ನ ಗಮನಕ್ಕೆ ಬಂದಾಗ ನಾನು ಮೊದಲು ದೈವಸ್ಥಾನದ ಆಡಳಿತ ಕಮಿಟಿಯವರನ್ನು ವಿಚಾರಿಸಿದಾಗ, ಅವರಿಗೂ ಈ ಕುರಿತಾದ ಮಾಹಿತಿ ಇರಲಿಲ್ಲವೆಂದು ತಿಳಿದುಬಂತು. ಆದರೆ ಬಾಯಾರು ಗಣೇಶ ಪಂಬದನ ನರ್ತನ ಸೇವೆಯಿಂದ ಸಂತೃಪ್ತರಾಗದ ದೈವಸ್ಥಾನದವರು ಅದಾಗಲೇ ಆತನನ್ನು ಮುಂಬರುವ ವರ್ಷದಿಂದ ನೇಮದ ಸೇವೆಗೆ ಯೋಜಿಸದಿರಲು ತೀರ್ಮಾನಿಸಿದ್ದರು.
ಇದರಿಂದ ಕುಪಿತಗೊಂಡ ಗಣೇಶನು ಚಿಪ್ಪಾರಿನ ತನ್ನ ಮನೆಯಲ್ಲಿ ದಿನಾಂಕ 15.02.2026ರ ರಾತ್ರಿ ನನ್ನಿಂದಾಗಿಯೇ ಆತನ ಅಜಲು ತಪ್ಪಿತೆಂದು ಹಲವಾರು ಜನರ ಸಮ್ಮುಖದಲ್ಲಿ ನನ್ನನ್ನು ನಿಂಧಿಸಿದ್ದಾನೆ.
ಈ ವಿಚಾರವನ್ನು ನಾನು ಬೋಳೂರಿನ ದೈವಸ್ಥಾನದ ಕಮಿಟಿಯವರಿಗೆ ತಿಳಿಸಿದ್ದು, ಇದರ ಬಗ್ಗೆ ಈ ಬಗ್ಗೆ ದೈವ ನರ್ತಕರ ಸಂಘಕ್ಕೆ ಮತ್ತು ಪ್ರಮುಖ ಗುತ್ತಿನವರಿಗೆ ತಿಳಿಸಿದ್ದು, ಈ ರೀತಿ ಮಾಡಿರುವುದು ತಪ್ಪೆಂದು ಹೇಳಿದರೂ, ಬಳಿಕ ನನ್ನದೇ ಬಾಯಿ ಮುಚ್ಚಿಸಲು ನೋಡಿದ್ದಾರೆ. ಬೋಳೂರಿನ ಜಾರಂದಾಯ ದೈವಸ್ಥಾನದ ಕಮಿಟಿಯವರು ಮುಂದಿನ ಬಾರಿ ಚಿಪ್ಪಾರಿನ ಗಣೇಶ ಪಂಬದರಿಗೆ ಸೇವೆ ನೀಡುವುದಿಲ್ಲ ಎಂದಿದ್ದಾರೆ. ದೈವಾರಾಧನೆಗೆ ಅಪಚಾರ ಮಾಡಿರುವ ಗಣೇಶ ಪಂಬದರ ಕೆಲಸವನ್ನು ನಮ್ಮ ಜನಾಂಗದವರು ಖಂಡಿಸಬೇಕು ಎಂದು ಡಾ.ರತಿ ಹೇಳಿದ್ದಾರೆ