ಉಡುಪಿ, ಡಿಸೆಂಬರ್ 18: ವಿಧ್ಯಾರ್ಥಿನಿ ಅಕ್ಷತಾ ಪೂಜಾರಿ ಮುಂಜಾನೆ ನಾಲ್ಕು ಗಂಟೆಗೆ ಮನೆಗೆ ನುಗ್ಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಈ ಪ್ರಕರಣದ ಸಂತ್ರಸ್ತ ವಡ್ಡರ್ಸೆಯ ದೇವೇಂದ್ರ ಸುವರ್ಣ ಅಲ್ಲಗೆಳೆದಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ನಲ್ಲಿ ಪತ್ನಿ ಶಕುಂತಳಾ ಹಾಗೂ ತಾಯಿ ಪದ್ದಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಸುವರ್ಣ, ಈ ಪ್ರಕರಣದಲ್ಲಿ ನನಗೆ ಅನ್ಯಾಯವಾಗಿದೆ. ದುಡಿದು ತಿನ್ನುತಿದ್ದ ತಾನು ಇಂದು 11 ವರ್ಷಗಳಿಂದ ನರಕಯಾತನೆ ಅನುಭವಿಸುತಿದ್ದೇನೆ. ದೇಶದ ಸಂವಿಧಾನ, ನ್ಯಾಯ ವ್ಯವಸ್ಥೆಯನ್ನು ನಂಬಿ ನ್ಯಾಯಾಲಯದ ಮೂಲಕ ಹೋರಾಡುತ್ತಿರುವ ನನಗೆ ಎಲ್ಲಾ ಕಡೆಯಿಂದಲೂ ಅನ್ಯಾಯವೇ ಆಗುತ್ತಿದೆ ಎಂದರು.
ದುಡಿಯಲು ಅಸಾಧ್ಯವಾದ ನನಗೆ ನ್ಯಾಯಾಲಯ ನೀಡಿದ ಪರಿಹಾರ ಮರೀಚಿಕೆಯಾಗಿದೆ. ಎಲ್ಲಕ್ಕೂ ನಾನು ತಾಯಿ-ಪತ್ನಿಯನ್ನೇ ಅವಲಂಬಿಸಿದ್ದೇನೆ. ನ್ಯಾಯಕ್ಕಾಗಿ ಈವರೆಗೆ ಏಕಾಂಗಿಯಾಗಿ ಹೋರಾಡುತಿದ್ದ ನಾನೂ, ಅಕ್ಷತಾರ ಸುಳ್ಳು ಆರೋಪವನ್ನು ನಂಬಿ ಅವರ ಸಮುದಾಯ ಹೋರಾಟಕ್ಕಿಳಿದ ಬಳಿಕ ನಾನು ಕೂಡಾ ನನ್ನ ಸಮುದಾಯದ (ಮೊಗವೀರ) ಜನರ ಬೆಂಬಲದೊಂದಿಗೆ ಹೋರಾಟ ನಡೆಸುವ ಬಗ್ಗೆ ಯೋಜನೆ ಮಾಡುತಿದ್ದೇನೆ ಎಂದರು.
ಅಕ್ಷತಾ ಪೂಜಾರಿ ಎಲ್ಲರೂ ನಂಬುವ ರೀತಿಯಲ್ಲಿ ಪೊಲೀಸರು ಹಾಗೂ ನನ್ನ ವಿರುದ್ಧ ದೊಡ್ಡ ಮಟ್ಟದಲ್ಲಿ ಸುಳ್ಳು ಆರೋಪಗಳನ್ನು ಮಾಡುತಿದ್ದಾರೆ. ಸತ್ಯ ಇಂದಲ್ಲ ನಾಳೆ ತಿಳಿದೇ ತಿಳಿಯುತ್ತದೆ. ಇಡೀ ಪ್ರಕರಣದಲ್ಲಿ ನಾನು ನ್ಯಾಯಬದ್ಧನಾಗಿ ನಡೆದುಕೊಂಡಿದ್ದೇನೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇರಿಸಿಕೊಂಡಿದ್ದೇನೆ. ಆದರೆ ನಿನ್ನೆಯ ಹೋರಾಟದಲ್ಲಿ ನನ್ನ ಮೇಲೆಯೇ ಎಫ್ಐಆರ್ ದಾಖಲಾಗುವಂತೆ ಮಾಡಿದ್ದಾರೆ ಎಂದರು.



