ಉತ್ತರಪ್ರದೇಶ ಜುಲೈ 03: ಉತ್ತರಪ್ರದೇಶದ ಸಿಹೋರಿ (ಕೊಖ್ರಾಜ್-ಹಾಡಿಯಾ) ಟೋಲ್ ಪ್ಲಾಜಾದಲ್ಲಿ ಜೂನ್ 26ರಂದು ಸಂಭವಿಸಿದ ಭೀಕರ ಎಲ್ಪಿಜಿ ಟ್ಯಾಂಕರ್ ಅಪಘಾತ ಹಾಗೂ ಸ್ಫೋಟದ ದುರಂತದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಟೋಲ್ ಕಾರ್ಮಿಕರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಈ ಭೀಕರ ದುರಂತದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇದೇ ವೇಳೆ ಇಡೀ ಟೋಲ್ ಪ್ಲಾಜಾವನ್ನು ನರಕವಾಗಿಸಿದ ಆಘಾತಕಾರಿ ಅಪಘಾತದ ಲೈವ್ ಸಿಸಿಟಿವಿ (CCTV) ದೃಶ್ಯಾವಳಿಗಳು ಹೊರಬಂದಿವೆ. ರಾಯ್ಬರೇಲಿ ಮೂಲದ ಹಿರಾಮಣಿ ಸಿಂಗ್ (29) ಮತ್ತು ಮಧ್ಯಪ್ರದೇಶದ ಕೃಷ್ಣಪಾಲ್ ಮೌರ್ಯ (23) ಗುರುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ದುರ್ದೈವಿ ಕಾರ್ಮಿಕರು.

ರಾಷ್ಟ್ರೀಯ ಹೆದ್ದಾರಿ 2ರಲ್ಲಿರುವ ಕೊಖ್ರಾಜ್-ಹಾಡಿಯಾ ಟೋಲ್ ಪ್ಲಾಜಾದಲ್ಲಿ ಜೂನ್ 26ರಂದು ಮುಂಜಾನೆ 6:40ರ ಸುಮಾರಿಗೆ ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದವು. ಈ ವೇಳೆ ಅತಿ ವೇಗವಾಗಿ ಬಂದ ಎಲ್ಪಿಜಿ ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ನೇರವಾಗಿ ಟೋಲ್ ಪ್ಲಾಜಾದ ಕ್ಯಾಬಿನ್ ಮತ್ತು ಕಾಂಕ್ರೀಟ್ ಗೋಡೆಗೆ ಭೀಕರವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಟ್ಯಾಂಕರ್ನಲ್ಲಿದ್ದ ಗ್ಯಾಸ್ ಕ್ಷಣಾರ್ಧದಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಫೋಟಗೊಂಡಿದ್ದು, ಇಡೀ ಟೋಲ್ ಪ್ಲಾಜಾ ಬೆಂಕಿಯ ಕೆನ್ನಾಲಗೆಗೆ ತುತ್ತಾಗಿದೆ. ಸುತ್ತಲೂ ದಟ್ಟ ಹೊಗೆ ಆವರಿಸಿದ್ದು, ಕ್ಯಾಬಿನ್ನಲ್ಲಿದ್ದವರು ಓಡಲು ಸಾಧ್ಯವಾಗದೆ ಬೆಂಕಿಗೆ ಸಿಲುಕಿದ್ದಾರೆ.
ಅಪಘಾತ ಸಂಭವಿಸಿದ ದಿನವೇ ಟ್ಯಾಂಕರ್ ಚಾಲಕ ಉತ್ತರ ಪ್ರದೇಶದ ಧರ್ಮೇಂದ್ರ ದುಬೆ (40) ಮತ್ತು ಟೋಲ್ ಸಿಬ್ಬಂದಿ ಅಲೋಕ್ ಸಿಂಗ್ ಸ್ಥಳದಲ್ಲೇ ಸಜೀವ ದಹನವಾಗಿದ್ದರು. ಬುಧವಾರ ತೀವ್ರವಾಗಿ ಗಾಯಗೊಂಡಿದ್ದ ರಸ್ತೆ ಬಳಕೆದಾರ ಅನಿಲ್ ಕುಮಾರ್ ಸಾವನ್ನಪ್ಪಿದ್ದರು. ಇದೀಗ ಚಿಕಿತ್ಸೆಯಲ್ಲಿದ್ದ ಹಿರಾಮಣಿ ಸಿಂಗ್ ಮತ್ತು ಕೃಷ್ಣಪಾಲ್ ಮೌರ್ಯ ಮೃತಪಟ್ಟಿದ್ದಾರೆ.

ಮೃತ ಹಿರಾಮಣಿ ಅವರ ತಂದೆ 4 ವರ್ಷಗಳ ಹಿಂದೆ ಮೃತಪಟ್ಟಿದ್ದು, ಹೆತ್ತವರಿಗೆ ಇವರೊಬ್ಬನೇ ಮಗನಾಗಿದ್ದ. ಇವರ ಸಾವಿನಿಂದ ವೃದ್ಧ ತಾಯಿ, ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳು ಅನಾಥರಾಗಿದ್ದಾರೆ. ಮಧ್ಯಪ್ರದೇಶದ ಯುವಕ ಕೃಷ್ಣಪಾಲ್ ಕಳೆದ 2 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ಆಧಾರಸ್ತಂಭವಾಗಿದ್ದ. ಸದ್ಯ ಅಪಘಾತದಲ್ಲಿ ಗಂಭೀರವಾಗಿ ಸುಟ್ಟ ಗಾಯಗಳಾಗಿರುವ ಅತುಲ್ ಕುಮಾರ್ ಮಿಶ್ರಾ ಎಂಬ ಮತ್ತೊಬ್ಬ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಯಾಗ್ರಾಜ್ ಆಸ್ಪತ್ರೆಯ ಬರ್ನ್ಸ್ ವಾರ್ಡ್ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.