ಕರಾವಳಿ ಸಿನಿರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿರುವ ತುಳು ಸಿನಿಮಾ ‘ಕಜ್ಜ: ಕರ್ಮ ರಿಟರ್ನ್ಸ್’ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ವಿಭಿನ್ನ ಕಥಾಹಂದರ ಹಾಗೂ ಹೊಸ ಮೇಕಿಂಗ್ನಿಂದ ಈಗಾಗಲೇ ಗಮನ ಸೆಳೆದಿರುವ ಈ ಸಿನಿಮಾ ಮೇ 15ರಂದು ಭರ್ಜರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.

ನಟ–ನಿರ್ದೇಶಕ ಸಿದ್ಧಾರ್ಥ್ ಶೆಟ್ಟಿ ಅಭಿನಯಿಸಿರುವ ಈ ಚಿತ್ರವನ್ನು ಜಿಷ್ಣು ಎಸ್. ಮೆನನ್ ಹಾಗೂ ಸಿದ್ಧಾರ್ಥ್ ಶೆಟ್ಟಿ ಸಂಯುಕ್ತವಾಗಿ ನಿರ್ದೇಶಿಸಿದ್ದಾರೆ. ರಂಗಕರ್ಮಿ ಮೋಹನ್ ರಾಜ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದು, ಸುಮುಖ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿಶಾಂತ್ ಮೆನೆಜಸ್ ನಿರ್ಮಾಣ ಮಾಡಿದ್ದಾರೆ. ಹೊಸ ತಂತ್ರಜ್ಞಾನ ಮತ್ತು ವಿಭಿನ್ನ ದೃಶ್ಯ ವಿನ್ಯಾಸದ ಮೂಲಕ ಸಿನಿಮಾ ಮೂಡಿ ಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಚಿತ್ರದಲ್ಲಿ ಸಿದ್ಧಾರ್ಥ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರ ಜೊತೆ ಅರವಿಂದ್ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಬಹುಭಾಷಾ ನಟ ವಸಿಷ್ಠ ಸಿಂಹ ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಗ್ರಾಮೀಣ ಹಿನ್ನೆಲೆಯಲ್ಲೇ ಸಾಗುವ ಈ ಕಥೆ ‘ಕರ್ಮ’ ಎಂಬ ತತ್ವದ ಸುತ್ತ ಹೆಣೆದಿದೆ. ಮನುಷ್ಯನು ಮಾಡಿದ ತಪ್ಪಿಗೆ ಒಂದು ದಿನ ಪ್ರತಿಫಲ ಎದುರಾಗುತ್ತದೆ ಎಂಬ ಸಂದೇಶವನ್ನು ಥ್ರಿಲ್ಲರ್, ಆಕ್ಷನ್ ಹಾಗೂ ಭಾವನಾತ್ಮಕ ಘಟನೆಗಳ ಮೂಲಕ ಚಿತ್ರ ಹೇಳಲು ಪ್ರಯತ್ನಿಸಿದೆ. ಹಾಸ್ಯ, ಥ್ರಿಲ್ಲರ್, ಆಕ್ಷನ್ ಮತ್ತು ಪ್ರೇಮಕಥೆಯ ಮಿಶ್ರಣವಾಗಿ ಸಿನಿಮಾ ರೂಪುಗೊಂಡಿದೆ.
ಚಿತ್ರದ ತಾಂತ್ರಿಕ ತಂಡದಲ್ಲೂ ಅನುಭವಿಗಳ ಬಳಗವೇ ಇದ್ದಾರೆ. ಚಂದು ಮೆಪ್ಪಯೂರ್ ಛಾಯಾಗ್ರಹಣ ಮಾಡಿದ್ದು, ಶರತ್ ಹೆಗ್ಡೆ ಸಂಕಲನ ಮಾಡಿದ್ದಾರೆ. ವಿಜೇತ್ ಆರ್. ನಾಯಕ್ ನೃತ್ಯ ಸಂಯೋಜನೆ ನೀಡಿದ್ದು, ಸಾಹಸ ನಿರ್ದೇಶನವನ್ನು ಯೋಗಾನಂದ್ ನಿರ್ವಹಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸುವ ಯೋಜನೆ ಇದೆ. ಇದೇ ವೇಳೆ ಏಪ್ರಿಲ್ 4ರಂದು ಮಸ್ಕತ್ನಲ್ಲಿ ಪ್ರೀಮಿಯರ್ ಶೋ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಒಟ್ಟಾರೆ ಹೊಸ ಪ್ರಯೋಗದೊಂದಿಗೆ ಬರುತ್ತಿರುವ ‘ಕಜ್ಜ: ಕರ್ಮ ರಿಟರ್ನ್ಸ್’ ತುಳು ಸಿನಿರಂಗದಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆ ಮೂಡಿಸಿದೆ. ಕರಾವಳಿ ಸೇರಿದಂತೆ ಹಲವೆಡೆಗಳಲ್ಲಿ ಸಿನಿಮಾ ಮೇ 15ರಂದು ಪ್ರೇಕ್ಷಕರ ಮುಂದೆ ಬರಲಿದೆ.