ವಾರಣಾಸಿ, ಏಪ್ರಿಲ್ 05: “ಚಲನಚಿತ್ರಗಳು ಕೇವಲ ಮನರಂಜನೆಯ ಸಾಧನವಾಗದೆ ಸಮಾಜಕ್ಕೆ ಸನ್ಮಾರ್ಗ ತೋರಿಸುವ ದಾರಿದೀಪವಾಗಬೇಕು. ಕಲೆ ಮತ್ತು ಸೃಜನಶೀಲತೆಯ ಹೆಸರಿನಲ್ಲಿ ಸಮಾಜದ ಮೌಲ್ಯಗಳನ್ನು ಬಲಿಗೊಡುವುದು ಸರಿಯಲ್ಲ,” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರರಂಗಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಾರಣಾಸಿಯ ಬಿ.ಎಲ್.ಡಬ್ಲ್ಯೂ (BLW) ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಚಕ್ರವರ್ತಿ ಸಾಮ್ರಾಟ್ ವಿಕ್ರಮಾದಿತ್ಯ’ ಮಹಾನಾಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಿನಿಮಾಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಿಂಸೆ ಮತ್ತು ಅಪರಾಧದ ಕುರಿತು ಕಳವಳ ವ್ಯಕ್ತಪಡಿಸಿದ ಸಿಎಂ, “ಖಳನಾಯಕರನ್ನು ಹೀರೋಗಳಂತೆ ಬಿಂಬಿಸುವುದು ಯುವ ಪೀಳಿಗೆಯನ್ನು ದಾರಿತಪ್ಪಿಸುತ್ತದೆ. ಇದರಿಂದ ಸಮಾಜದಲ್ಲಿ ಒಳಿತು ಮತ್ತು ಕೆಡುಕಿನ ನಡುವಿನ ವ್ಯತ್ಯಾಸ ಮರೆಯಾಗುತ್ತಿದೆ. ಸಿನಿಮಾ ಕೇವಲ ಮನರಂಜನೆಯ ಸಾಧನವಾಗದೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಿರಬೇಕು,” ಎಂದು ಪ್ರತಿಪಾದಿಸಿದರು.
“ಹಿಂದೆ ಡಕಾಯಿತರು ಮತ್ತು ಅಪರಾಧಿಗಳನ್ನು ಮಹಾನ್ ವ್ಯಕ್ತಿಗಳಂತೆ ತೋರಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಇಂದಿನ ಸಮಾಜ ಅದನ್ನು ತಿರಸ್ಕರಿಸಿದೆ. ರಾಷ್ಟ್ರಭಕ್ತಿ ಮತ್ತು ಸಕಾರಾತ್ಮಕತೆಯನ್ನು ಪ್ರೇರೇಪಿಸುವ ಕಥೆಗಳಿಗೆ ಚಿತ್ರನಿರ್ಮಾಪಕರು ಮೊದಲ ಆದ್ಯತೆ ನೀಡಬೇಕು. ಸಮಾಜದ ಮೇಲೆ ಸಿನಿಮಾಗಳ ಪ್ರಭಾವ ಅತೀವವಾಗಿರುವುದರಿಂದ, ಸೃಜನಶೀಲರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು,” ಎಂದು ಅವರು ಕರೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ 700 ಕೆಜಿ ತೂಕದ ಬೃಹತ್ ‘ವಿಕ್ರಮಾದಿತ್ಯ ವೈದಿಕ ಗಡಿಯಾರ’ವನ್ನು ಹಸ್ತಾಂತರಿಸಿದರು. ಉಜ್ಜಯಿನಿ ಮತ್ತು ಕಾಶಿ ನಡುವಿನ ಐತಿಹಾಸಿಕ ಸಂಬಂಧವನ್ನು ಸಾರುವ ಈ ಗಡಿಯಾರವನ್ನು ಕಾಶಿ ವಿಶ್ವನಾಥ ಧಾಮದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಜೊತೆಗೆ, ರಾಜ ವಿಕ್ರಮಾದಿತ್ಯನ ಇತಿಹಾಸದ ಕುರುಹಾದ ‘ಚುನಾರ್ ಕೋಟೆ’ಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದಾಗಿ ಸಿಎಂ ಇದೇ ಸಂದರ್ಭದಲ್ಲಿ ಘೋಷಿಸಿದರು.